Breaking News

ಪ್ರಯಾಣಿಕರನ್ನು ‘ಪಲ್ಲಕ್ಕಿ’ಯಲ್ಲಿ ಹೊತ್ತು ತಿರುಗಲಿದೆ ಕೆಎಸ್​ಆರ್​ಟಿಸಿ

Spread the love

ಬೆಂಗಳೂರು: ಪ್ರಯಾಣಿಕರನ್ನು ಅಂಬಾರಿಯಲ್ಲಿ ಹೊತ್ತು ರಾಜ್ಯದ ರಸ್ತೆಗಳಲ್ಲಿ ಸಂಚರಿಸಿದ್ದ ಕೆಎಸ್​ಆರ್​ಟಿಸಿ ಇದೀಗ ಪಲ್ಲಕ್ಕಿ ಮೂಲಕ ಪ್ರಯಾಣಿಕರನ್ನು ಹೊತ್ತು ಸಂಚರಿಸಲು ಸಿದ್ಧವಾಗಿದೆ.

‘ಸಂತೋಷವು ಪ್ರಯಾಣಿಸುತ್ತಿದೆ’ ಎನ್ನುವ ಟ್ಯಾಗ್ ಲೈನ್​ನೊಂದಿಗೆ ಸಾರಿಗೆ ನಿಗಮದ ಪಲ್ಲಕ್ಕಿ ರಸ್ತೆಗಿಳಿಯಲು ಸಜ್ಜಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಸ್ಲೀಪರ್ ಬಸ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಹವಾನಿಯಂತ್ರಣ ರಹಿತ ಬಸ್​​ಗಳಿಗೆ ಪ್ರಯಾಣಿಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಂಬಾರಿ ಹೆಸರಿನಲ್ಲಿ ನಾನ್ ಎಸಿ ಸ್ಲೀಪರ್ ಸೇವೆ ಒದಗಿಸುತ್ತಿದ್ದ ಕೆಸ್​ಆರ್​ಟಿಸಿ ಇದೀಗ ಹೊಸದಾಗಿ 40 ನಾನ್ ಎಸಿ ಸ್ಲೀಪರ್ ಬಸ್​ಗಳನ್ನು ಖರೀದಿಸಿದೆ. ಅತ್ಯುತ್ತಮ ಬಣ್ಣ, ವಿನ್ಯಾಸ ಒಳಗೊಂಡ ಬಸ್​ಗಳು ಎಸಿ ಬಸ್​ಗಳಿಗೆ ಕಡಿಮೆ ಇಲ್ಲದಂತೆ ಸಿದ್ದಗೊಂಡಿವೆ.

ನೂತನ ನಾನ್ ಎಸಿ ಸ್ಲೀಪರ್ ಬಸ್​ಗಳಿಗೆ ‘ಪಲ್ಲಕ್ಕಿ’ ಎನ್ನುವ ಹೆಸರನ್ನು ಇಡಲಾಗಿದೆ. ‘ಸಂತೋಷವು ಪ್ರಯಾಣಿಸುತ್ತಿದೆ’ ಎನ್ನುವ ಟ್ಯಾಗ್ ಲೈನ್ ಬಳಸಲಾಗಿದೆ. ಕೆಎಸ್​ಆರ್​ಟಿಸಿಯ ಪ್ರೀಮಿಯಂ ಸೇವೆ ಒದಗಿಸುವ ಬಸ್​ಗಳಿಗೆ ಸಾಂಸ್ಕೃತಿಕ ಹೆಸರುಗಳನ್ನು ಇಡುವ ಪರಿಪಾಠ ಇದ್ದು, ರಾಜಹಂಸ, ಅಂಬಾರಿ, ನಂತರ ಪಲ್ಲಕ್ಕಿಯ ಹೆಸರು ಇಡಲಾಗಿದೆ. ಪ್ರಯಾಣಿಕರಿಗೆ ಸಂತೋಷದ ಪ್ರಯಾಣ ನೀಡಲು 40 ಪಲ್ಲಕ್ಕಿಗಳು ಸಿದ್ಧವಾಗಿವೆ. ಅಕ್ಟೋಬರ್ 7 ರಿಂದ ರಾಜ್ಯದ ರಸ್ತೆಗಳಲ್ಲಿ ಸಾರಿಗೆ ನಿಗಮದ ಪಲ್ಲಕ್ಕಿಗಳ ಮೆರವಣಿಗೆ ಆರಂಭಗೊಳ್ಳಲಿದೆ.

ಅಕ್ಟೋಬರ್​ 7 ರಂದು ವಿಧಾನಸೌಧ ಪೂರ್ವ ದ್ವಾರದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಪಲ್ಲಕ್ಕಿಯ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಲ್ಲಕ್ಕಿ ಹೆಸರಿನ 40 ನಾನ್ ಎಸಿ ಸ್ಲೀಪರ್ ಬಸ್​ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, 100 ನೂತನ ಕರ್ನಾಟಕ ಸಾರಿಗೆ ಬಸ್ಸುಗಳ ಸಂಚಾರಕ್ಕೂ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

ಆಗಸ್ಟ್ 28 ರಂದು ರಸ್ತೆಗೆ ಇಳಿದಿತ್ತು ‘ಕಲ್ಯಾಣ ರಥ’: ಹೌದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಹೈಟೆಕ್ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್​ನ್ನು ಬಿಡುಗಡೆ ಮಾಡಿತ್ತು. ಈ ಬಸ್​ಗೆ ಕಲ್ಯಾಣ ರಥ ಎಂಬ ಹೆಸರನ್ನು ಇಡಲಾಗಿದೆ. ಈ ಬಸ್​ನ ವಿಶೇಷತೆ ನೋಡುವುದಾದರೆ ಕಲ್ಯಾಣ ರಥ ಬ್ರ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಕ್ಲಾಸ್ 40 ಆಸನಗಳನ್ನು ಹೊಂದಿದೆ.

350 ಬಿ.ಎಸ್-6 ಎಂಜಿನ್ ಹೊಂದಿದ್ದು, ವಿಶಿಷ್ಟ ಸಸ್ಪೆನ್ಶನ್​ಗಳಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದ್ದು, ಸ್ವಯಂಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆಯನ್ನು ಹೊಂದಿದೆ. ಈ ಬಸ್​ ಮೊದಲು ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಪ್ರಯಾಣವನ್ನು ಬೆಳೆಸಿತ್ತು. ಮೊದಲ ಹಂತದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು – ಬೆಂಗಳೂರು ನಡುವೆ ಸಂಚಾರ ನಡೆಸಿದೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ