ಬೆಂಗಳೂರು: ವ್ಯಾಪಕ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ನೇತೃತ್ವದ ತಂಡ ನಗರದಲ್ಲಿನ 12 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್ಟಿಓ) ಮೇಲೆ ದಾಳಿ ನಡೆಸಿದೆ.
ಬೆಂಗಳೂರಿನಲ್ಲಿ ಆರ್ಟಿಓ ಕಚೇರಿಗಳಲ್ಲಿ ನಿರಂತರ ಅವ್ಯವಹಾರ ಹಾಗೂ ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆ, ಗೌಪ್ಯ ಮಾಹಿತಿ ಆಧರಿಸಿ ಬುಧವಾರ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿಗಳು ಆರ್ಟಿಓ ಕಚೇರಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಜಯನಗರ ಹಾಗೂ ರಾಜಾಜಿನಗರದ ಆರ್ಟಿಓ ಕಚೇರಿಗಳಿಗೆ ಲೋಕಾಯುಕ್ತರು ತೆರಳಿ ತಪಾಸಣೆ ನಡೆಸಿದರು. ಉಪ ಲೋಕಾಯುಕ್ತ ಕೆ ಎನ್ ಫಣೀಂದ್ರ ಅವರು ಯಶವಂತಪುರ ಆರ್ಟಿಓ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಜೊತೆಗೆ ಯಲಹಂಕ, ಇಂದಿರಾನಗರ, ಕೆ ಆರ್ ಪುರ, ಹೆಚ್ಎಸ್ಆರ್ ಲೇಔಟ್ ಸೇರಿ ನಗರದ 12 ಪ್ರಾದೇಶಿಕ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಪರಿಶೀಲನೆ ವೇಳೆ, ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನದ ದಾಖಲಾತಿ ನೀಡದೇ ವಿಳಂಬ ಧೋರಣೆ, ಹೊಸ ನೋಂದಣಿ ಮಾಡಿಸದೇ ಬಾಕಿ ಉಳಿಸಿಕೊಂಡಿರುವುದು, ಸ್ಥಳೀಯ ಏಜೆಂಟರೊಂದಿಗೆ ಸಿಬ್ಬಂದಿ ಭಾಗಿಯಾಗಿ ಅವ್ಯವಹಾರದಲ್ಲಿ ಶಾಮೀಲು ಸೇರಿದಂತೆ ವಿವಿಧ ರೀತಿಯ ಅಕ್ರಮ ಎಸಗಿರುತ್ತಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.