ಬೆಂಗಳೂರು: ಲೋಕಸಭೆ ಚುನಾವಣೆ ಹಾಗೂ ಜೆಡಿಎಸ್ ಜೊತೆ ಮೈತ್ರಿ ವಿಚಾರ ಚರ್ಚಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಿತು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮುಖಂಡರಾದ ತೇಜಸ್ವಿನಿ ಅನಂತಕುಮಾರ್, ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ.
ಸಭೆಗೂ ಮುನ್ನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತು: ಪಕ್ಷ ಸಂಘಟನೆ ಜೊತೆಗೆ ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಕುರಿತು ನಾಯಕರು ಸಭೆಯಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ. ಸಭೆಗೂ ಮುನ್ನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ”ಈಗಾಗಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡೋದಿಲ್ಲ ಅಂತ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ಮುಂದೆ ಎಷ್ಟು ಗಟ್ಟಿಯಾಗಿ ನಿಲ್ತಾರೆ ಅಂತ ನೋಡೋಣ” ಎಂದರು.
ಬಿಜೆಪಿ- ಜೆಡಿಎಸ್ ಮೈತ್ರಿ ಸಮರ್ಥಿಸಿಕೊಂಡ ಮಾಜಿ ಸಿಎಂ: ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ”ಈಗಾಗಲೇ ಎರಡೂ ಪಕ್ಷ ಒಂದಾಗಬೇಕು. ವಿರೋಧ ಪಕ್ಷಗಳು ಒಂದಾಗಬೇಕು ಅನ್ನುವ ನಿರೀಕ್ಷೆ ಇದೆ. ಮುಂದಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಎರಡೂ ಪಕ್ಷದ ವರಿಷ್ಠರು ಸೇರಿ ತೀರ್ಮಾನ ಮಾಡಲಿದ್ದಾರೆ” ಎಂದು ತಿಳಿಸಿದರು. ”ಕಾಂಗ್ರೆಸ್ ಪಕ್ಷ ಟೀಕೆ ಮಾಡ್ತಿದೆ. ಅಸಹಾಯಕ ಪಕ್ಷಗಳು ಅಂತ ಹೇಳಿದ್ದಾರೆ. ಈಗ ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿದ್ದಾರೆ. ಒಬ್ಬರಿಗೊಬ್ಬರು ಆಗದ ಮಮತಾ ಬ್ಯಾನರ್ಜಿ, ಸಿಪಿಐ, ಸಿಪಿಎಂ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್ ಎಲ್ಲರೂ ಒಟ್ಟಾಗಿದ್ದಾರೆ. ವಿರೋಧ ಪಕ್ಷಗಳು ಒಟ್ಟಾಗಿದ್ದು ಅವು ಅಸಹಾಯಕರಾ? ರಾಜಕಾರಣದ ಇತಿಹಾಸದಲ್ಲಿ ಅನೇಕ ಬದಲಾವಣೆ ಆಗಿದೆ. ಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ ಅವಶ್ಯಕತೆ ಇದೆ. ಹಾಗಾಗಿ ಮೈತ್ರಿ ಅನಿವಾರ್ಯ” ಎಂದು ಬೊಮ್ಮಾಯಿ ಅವರು ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಬೊಮ್ಮಾಯಿ ಸಮರ್ಥಿಸಿಕೊಂಡರು.