ದಾವಣಗೆರೆ : ತಾಲೂಕಿನ ನಲ್ಕುಂದ ಗ್ರಾಮದ ಗ್ರಾಮಸ್ಥರು ಆಧುನಿಕ ಯುಗದಲ್ಲೂ ಮೂಢನಂಬಿಕೆ ಮೊರೆ ಹೋಗಿದ್ದಾರೆ. ತೊನ್ನು ಹತ್ತಿದ ಮಹಿಳೆಯ ಶವ ಹೊರತೆಗೆದು ಸುಟ್ಟರೆ ಮಳೆ ಬರುತ್ತೆ ಎಂದು ನಂಬಿ ಮಹಿಳೆ (ಲಕ್ಷ್ಮಿದೇವಿ)ಯ ಶವವನ್ನು ಹೊರತೆಗೆದು ಮರು ಅಂತ್ಯ ಸಂಸ್ಕಾರ ಮಾಡಿ, ಮಹಿಳೆಯ ಕುಟುಂಬಸ್ಥರ ಅನುಮತಿಯಂತೆ ಸುಟ್ಟಿದ್ದಾರೆ. ಆದರೆ ಅದೇನಾಯಿತೋ ಗೊತ್ತಿಲ್ಲ, ಕ್ಷಣಾರ್ಧದಲ್ಲೇ ಇಡೀ ನಲ್ಕುಂದ ಗ್ರಾಮ ರಣರಂಗವಾಗಿ ಮಾರ್ಪಟ್ಟಿದೆ.
ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಜೀವನ ಕಟ್ಟಿಕೊಂಡಿದ್ದಾರೆ. ಗ್ರಾಮದ ಎಲ್ಲಾ ಸಮುದಾಯ, ಧರ್ಮದವರು ಸೇರಿ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದರು. ಆದರೆ, ಕಳೆದ ರಾತ್ರಿ ನಡೆದ ಕೆಲ ಮನಸ್ತಾಪಗಳಿಂದ ಇಡೀ ಗ್ರಾಮದ ಜನರಲ್ಲಿ ಗಲಾಟೆಯಾಗಿ ಜನರ ನೆಮ್ಮದಿ ಹಾಳಾಗಿದೆ.
ಅಂತ್ಯಸಂಸ್ಕಾರದ ವೇಳೆ ಗಲಾಟೆ : ನಲ್ಕುಂದ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ತೊನ್ನು ಹತ್ತಿದ ಮಹಿಳೆ ಸಾವನ್ನಪ್ಪಿದ್ದರಿಂದ ಅವರನ್ನು ಹೂತು ಹಾಕಿದ್ದರು. ಆದ್ದರಿಂದ ನಮ್ಮ ಭಾಗದಲ್ಲಿ ಮಳೆಯಾಗುತ್ತಿಲ್ಲ. ಬೆಳೆ ಒಣಗುತ್ತಿವೆ ಎಂದು ಹೇಳಿ ಆಕೆಯ ಶವವನ್ನು ಹೊರ ತೆಗೆದು ಸುಡಲು ಇಡೀ ಗ್ರಾಮದ ಜನರು ತೀರ್ಮಾನಿಸಿದ್ದರು. ಅಲ್ಲದೆ ಗ್ರಾಮದ ದೇವರ ಅಪ್ಪಣೆಯನ್ನು ಕೂಡ ತೆಗೆದುಕೊಂಡಿದ್ದರು. ಮಹಿಳೆಯ ಅಂತ್ಯಸಂಸ್ಕಾರದ ಕಾರ್ಯವನ್ನು (ಶನಿವಾರ) ಮಾಡುವಾಗ ಇಬ್ಬರ ನಡುವೆ ಜಗಳವಾಗಿದೆ. ಇದು ದೊಡ್ಡದಾಗಿ ಎರಡು ಸಮುದಾಯಗಳ ನಡುವಿನ ಜಗಳಕ್ಕೆ ಕಾರಣವಾಗಿದೆ ಎಂದು ಗ್ರಾಮದ ಮುಖಂಡ ರಂಗಸ್ವಾಮಿ ತಿಳಿಸಿದ್ದಾರೆ.