ಬೆಳಗಾವಿ : ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವೇಳೆ ವೀರಶೈವ ಮಹಾಸಭೆಯಲ್ಲಿದ್ದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅದರಲ್ಲಿನ ಬಹಳಷ್ಟು ಜನ ನಮಗೆ ಬೆಂಬಲ ಕೂಡ ಕೊಟ್ಟಿದ್ದರು. ಈಗ ನಾವೆಲ್ಲಾ ಒಂದಾಗಿ ಮತ್ತೆ ಹೋರಾಟ ಪ್ರಾರಂಭ ಮಾಡೋಣ ಎಂದು ಮಾತನಾಡಿದ್ದೇವೆ ಅಂತಾ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನನ್ನು ಯಾರೂ ಹೈಜಾಕ್ ಮಾಡಿಲ್ಲ, ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಎಂದು ರಾಜ್ಯದ ಮುಖಂಡರನ್ನು ಮೊನ್ನೆ ಕರೆದು ಮನವರಿಕೆ ಮಾಡಲಾಗಿದೆ. ನಮ್ಮಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಒಂದಾಗಿ ಇರೋಣ ಎಂದಿದ್ದಾರೆ. ನಾವು ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಬಸವಣ್ಣನವರ ತತ್ವದ ಮೇಲೆ ಹುಟ್ಟಿಕೊಂಡಿರುವ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೇಳಿದ್ದೆವು. ಬೌದ್ಧ, ಸಿಖ್, ಮುಸ್ಲಿಂ, ಜೈನ ಧರ್ಮಗಳಂತೆ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಮಾಡಿ ಎಂದು ಕೇಳಿದ್ದೆವು. ಆದರೆ, ಆ ಹೋರಾಟ ಕೆಲವರಿಗೆ ಅರ್ಥವಾಗಲಿಲ್ಲ. ಆ ಸಂದರ್ಭದಲ್ಲಿ ದಿಕ್ಕು ತಪ್ಪಿಸುವ ಕೆಲಸವಾಯಿತು. ಈಗ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಳಿಗೆ ಕೇಂದ್ರದ ಒಬಿಸಿ ಮೀಸಲಾತಿಗೆ ಆಗ್ರಹಿಸುತ್ತಿದ್ದೇವೆ” ಎಂದರು.
ಲಿಂಗಾಯತ ಹೋರಾಟದಿಂದ ಹಿಂದೆ ಸರಿದಿಲ್ಲ : ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ಹೊರಗೆ ಬಂದಿದ್ದೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಹೋರಾಟದಿಂದ ನಾನು ಹೊರಗೆ ಬಂದಿಲ್ಲ, ನಾನ್ಯಾಕೆ ಹೊರ ಬರಲಿ. ಜಾಮದಾರ್ ಅವರು ಹೋರಾಟ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಆದರೆ, ವ್ಯವಸ್ಥೆಯನ್ನು ಸರಿ ಮಾಡುವ ಅವಶ್ಯಕತೆಯಿದೆ. ಜನಗಣತಿಯಲ್ಲಿ ಲಿಂಗಾಯತ ಪದ ತೆಗೆದು ಹಿಂದೂ ಅಂತಾ ಸೇರಿಸಲಾಗಿದೆ. ಇದರಿಂದ ಲಿಂಗಾಯತ ಸಮಾಜದ ಜನಸಂಖ್ಯೆ ಕುಂಠಿತವಾಗಿದೆ. ನಾವು ವಿರೋಧ ಮಾಡದೇ ಇದ್ದರೆ ಸಮಾಜದ ವ್ಯವಸ್ಥೆ ಹದಗೆಡುತ್ತದೆ. ನಮ್ಮ ಸಮಾಜದ ಹಿರಿಯರು ಸೇರಿಕೊಂಡು ನಮ್ಮ ಜೊತೆ ಇರುವಂತೆ ನನಗೆ ಮೊನ್ನೆ ಹೇಳಿದ್ದಾರೆ” ಎಂದು ವಿವರಿಸಿದರು.