ಬೆಂಗಳೂರು, (ಆಗಸ್ಟ್. 06): ಕರ್ನಾಟಕದಲ್ಲಿ (karnataka) ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ.
ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಯಾರನ್ನು ಮಾಡುತ್ತೆ ಎನ್ನುವುದರಲ್ಲಿ ರಾಜ್ಯ ಬಿಜೆಪಿ(BJP) ನಾಯಕರು ಇದ್ದಾರೆ. ಇದರ ನಡುವೆ ಅತ್ತ ಜೆಡಿಎಸ್ನ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ವರ್ಗಾವಣೆ ದಂಧೆ ವಿಚಾರವಾಗಿ ಪೆನ್ಡ್ರೈವ್ ಬಂಬ್ ಸಿಡಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಒಂದು ಸಾವಿರ ಕೋಟಿ ವಸೂಲಿ ಪಕ್ಷ.. ಪೆನ್ಡ್ರೈವ್ ಎಂದು ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿರುವ ಕುಮಾರಸ್ವಾಮಿಗೆ ಆಪರೇಷನ್ ಹಸ್ತ(Operation Hasta) ಆತಂಕ ಶುರುವಾಗಿದೆ. ಹೌದು… ಆಪರೇಷನ್ ಸುಳಿವು ಸಿಕ್ಕಿರುವುದರಿಂದ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಬೆಂಕಿಯುಗುಳುತ್ತಿದ್ದಾರೋ ಗೊತ್ತಿಲ್ಲ. ಆದ್ರೆ, ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಯುತ್ತಿರುವ ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪಡೆ ಹೂಡಿರುವ ದಾಳ ಟೆನ್ಷನ್ ತಂದಿಟ್ಟಿದೆ.
ಲೋಕಸಭೆಯಲ್ಲಿ 20 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್, ಆಪರೇಷನ್ ಹಸ್ತಕ್ಕೆ ಮುಂದಾಗಿದೆ. ಈ ಆಪರೇಷನ್ ಮೇನ್ ಟಾರ್ಗೆಟ್ ಜೆಡಿಎಸ್. ಜೆಡಿಎಸ್ ಶಾಸಕರನ್ನ ಸೆಳೆಯಲು ಕಾಂಗ್ರೆಸ್ ನಿರಂತರ ಕಸರತ್ತು ಮಾಡುತ್ತಿದ್ದು, ಮೂಲಗಳ ಪ್ರಕಾರ ಈಗಾಗಲೇ 8ರಿಂದ 10 ಜೆಡಿಎಸ್ ಶಾಸಕರನ್ನ ಸಂಪರ್ಕಿಸಿರುವ ಮಾಹಿತಿ ಇದೆ. ಸರ್ಕಾರ ಇರುವುದರಿಂದ ಜೆಡಿಎಸ್ ಶಾಸಕರಿಗೆ ಅನುದಾನ ಸೇರಿದಂತೆ ಹಲವು ಆಮಿಷವೊಡ್ಡುವ ಸಾಧ್ಯತೆ ಇದೆ. ಯಾವ ಸಮಯದಲ್ಲಾದರೂ ಶಾಸಕರನ್ನ ಸೆಳೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಲೋಕಸಭೆಯಲ್ಲಿ ಕನಿಷ್ಠ 4ರಿಂದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಜೆಡಿಎಸ್ ಪ್ಲ್ಯಾನ್ ಮಾಡಿದೆ. ಆಪರೇಷನ್ ಹಸ್ತ ಆದ್ರೆ ಜೆಡಿಎಸ್ಗೆ ಅಭ್ಯರ್ಥಿಗಳ ಕೊರತೆ ಕಾಡಲಿದ್ದು, ಇದೇ ಟೆನ್ಷನ್ನಲ್ಲಿ ಕುಮಾರಸ್ವಾಮಿ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ ಆರೋಪಗಳಿಗೆ ತಲೆಕೆಡಿಸಿಕೊಳ್ಳದ ಕೈ ಪಡೆ ಟಕ್ಕರ್ ಕೊಡುತ್ತಿದೆ.