ಬೆಂಗಳೂರು: ಹಣ ಮತ್ತು ಕೊಳಿ ಮಾಂಸ ಹಂಚಿ ಚುನಾವಣೆ ಗೆದ್ದರುವುದಾಗಿ ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಶಾಸಕ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಇದೇ ವೇಳೆ, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ಗೂ ಸಮನ್ಸ್ ಜಾರಿ ಮಾಡಲಾಗಿದೆ.
ಹೊಳೆನರಸೀಪುರ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟಂಬರ್ 4 ಕ್ಕೆ ಮುಂದೂಡಿದೆ. ರೇವಣ್ಣ ಅವರು ಚುನಾವಣೆ ಅಕ್ರಮದಿಂದ ಶಾಸಕರಾಗಿದ್ದು, ಅವರನ್ನು ಅನರ್ಹಗೊಳಿಸಿ ಮೂರನೇ ಸ್ಥಾನದಲ್ಲಿರುವ ತನ್ನನ್ನು ಶಾಸಕ ಎಂದು ಘೋಷಿಸುವಂತೆ ದೇವರಾಜೇಗೌಡ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
ಇದೇ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ಇರುವ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೂ ಆರೋಪಿಸಲಾಗಿದೆ. ಅಲ್ಲದೇ, ಮತದಾನಕ್ಕೂ ಒಂದು ದಿನ ಮುಂಚೆ ಪ್ರತಿವಾದಿ ಎಚ್.ಡಿ.ರೇವಣ್ಣ ಅವರ ಸಹಚರರಿಂದ ಕ್ಷೇತ್ರದ ಅಣ್ಣೇನಹಳ್ಳಿ, ದಂಡಿಗನಹಳ್ಳಿ ಪ್ರತಿ ಮನೆಗೆ 2 ಜೀವಂತ ಕೋಳಿಗಳು ಮತ್ತು 3 ಸಾವಿರ ರು.ಗಳನ್ನ ಹಂಚಿಕೆ ಮಾಡಿದ್ದಾರೆ. ಮತದಾರರು ಸ್ವೀಕರಿಸಿದ ಬಳಿಕ ಮತಹಾಕುವುದಾಗಿ ಭರವಸೆ ನಿಡಿದ್ದರು. ಈ ಬೆಳವಣಿಗೆ ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 123ಕ್ಕೆ ವಿರುದ್ಧವಾಗಿದ್ದು, ಭ್ರಷ್ಟಾಚಾರ ನಡೆಸಿರುವುದು ತಿಳಿದು ಬರಲಿದೆ.