ವಿಜಯಪುರ : ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಡಿಜೆ – ಕೆಜಿಹಳ್ಳಿ ಸೇರಿದಂತೆ ವಿವಿಧೆಡೆ ನಡೆದ ಗಲಭೆ ಪ್ರಕರಣವನ್ನು ಮರುಪರಿಶೀಲನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್ ಅವರಿಗೆ ಬರೆದ ಪತ್ರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಇದು ಸಹಜ ಪ್ರಕ್ರಿಯೆಯಾಗಿದೆ. ಈಗಾಗಲೇ ಗೃಹ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ವಿಜಯಪುರದಲ್ಲಿ ಕುಡಿಯುವ ನೀರಿನ ಕುರಿತು ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ, ಕೆಜಿ ಹಳ್ಳಿ, ಮಂಗಳೂರು ಗಲಭೆ ಆರೋಪಿಗಳ ಮೇಲಿನ ಪ್ರಕರಣ ಕೈ ಬಿಡುವಂತೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ನಿರಪರಾಧಿಗಳಿಗೆ ತೊಂದರೆ ಆಗಬಾರದು ಎಂದು ಹೇಳಿದರು. ತನಿಖೆ ನಡೆದ ಬಳಿಕ ಯಾರು ಅಮಾಯಕರು, ಅಪರಾಧಿಗಳು ಗೊತ್ತಾಗುತ್ತೆ. ಅಪರಾಧಿಗಳು ಯಾರೆ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ಯಾವುದೇ ಪಕ್ಷ, ಜಾತಿ, ಧರ್ಮದವರಾಗಿದ್ದರೂ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದರು.
ಯಾರು ಅಪರಾಧಿಗಳು ಅವರಿಗೆ ಶಿಕ್ಷೆ ಆಗುತ್ತೆ: ನಿರಪರಾಧಿಗಳಿದ್ದರೆ ಯಾವುದೇ ಪಕ್ಷ, ಜಾತಿ, ಧರ್ಮ ನೋಡದೇ ಯಾರೇ ಇದ್ದರೂ ಅವರಿಗೆ ಅನ್ಯಾಯವಾಗಬಾರದು. ಆ ದಿಸೆಯಲ್ಲಿ ಗೃಹ ಸಚಿವರು ಕೆಲಸ ಮಾಡ್ತಾರೆ ಎಂದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ ಹಾಗೆ ನಮ್ಮ ಸರ್ಕಾರ ನಡೆಯುವುದಿಲ್ಲ. ಯತ್ನಾಳ್ ಹೇಳಿದಂತೆ ನಾವು ನಡೆಯಬೇಕು ಅಂತಾ ಏನೂ ಇಲ್ಲ. ಯಾರು ಅಪರಾಧಿಗಳು ಅವರಿಗೆ ಶಿಕ್ಷೆ ಆಗುತ್ತೆ. ಯಾರು ನಿರಪರಾಧಿಗಳಿಗೆ ಅನ್ಯಾಯವಾಗಲ್ಲ ಎಂದು ಹೇಳಿದರು.