Breaking News

ಬೆಂಗಳೂರಿನಲ್ಲಿ 1200 ಕ್ಕೂ ಹೆಚ್ಚು ರೌಡಿ ಶೀಟರ್ಸ್​ ಮನೆಗಳ ಮೇಲೆ ಪೊಲೀಸ್​​ ದಾಳಿ

Spread the love

ಬೆಂಗಳೂರು : ಹಲವು ಬಾರಿ ಎಚ್ಚರಿಕೆ ನೀಡಿದರೂ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ನಗರದ ರೌಡಿ ಶೀಟರ್ ಮನೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಯಲ್ಲಿ ಕ್ರಿಯಶೀಲರಾಗಿ ನಗರದ ಎಂಟು ವಲಯಗಳಲ್ಲಿ ವಾಸವಾಗಿದ್ದ 1200ಕ್ಕೂ ಹೆಚ್ಚು ರೌಡಿ ಶೀಟರ್​ ಮನೆಗಳ ಮೇಲೆ ಸಾವಿರಾರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ದಾಳಿ ನಡೆಸಿ ಪರಿಶೀಲನೆ ನಡೆದಿದೆ.

ಚುನಾವಣೆ ವೇಳೆ ರೌಡಿ ಶೀಟರ್​ಗಳನ್ನು ಕರೆಸಿ ವಾರ್ನಿಂಗ್ ಕೊಟ್ಟು ಜೈಲಿಗೆ ಕಳಿಸಿದ್ದೋರನ್ನೆಲ್ಲಾ ಪೊಲೀಸರು ಚುನಾವಣೆ ಮುಗಿದಮೇಲೆ ಬಿಡುಗಡೆಗೊಳಿಸಿ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ವಾರ್ನ್ ಮಾಡಿದ್ದರು. ಆದರೇ ನಗರದ ಕೆಲವೆಡೆ ರೌಡಿ ಆಸಾಮಿಗಳ ಪುಂಡಾಟ ಶುರುವಾಗಿತ್ತು. ಅಲ್ಲದೇ ಗಾಂಜಾ ಮತ್ತು ಡ್ರಗ್ಸ್​ ಗಮ್ಮತ್ತು ಮತ್ತೆ ಶುರುವಾಗಿತ್ತು. ಮಾದಕ ಜಗತ್ತಿನ ವಿರುದ್ಧ ಮತ್ತು ರೌಡಿಸಂ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಬೆಂಗಳೂರು ಸಿಟಿ ಪೊಲೀಸರು ಇಂದು ನಗರದಾದ್ಯಂತ ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪಶ್ಚಿಮ ವಲಯದ ಕೇಂದ್ರ, ಪಶ್ಚಿಮ, ಉತ್ತರ ದಕ್ಷಿಣ ವಿಭಾಗದ 707 ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದ್ದು, ದಾಳಿ ವೇಳೆ 2 ವೆಪನ್ ಗಳು, ಒಂದು ವಾಹನ, 8 ಕೆಜಿ ಗಾಂಜಾ ಪತ್ತೆಯಾಗಿದೆ. ಅಲ್ಲದೇ ಜಾಮೀನು ರಹಿತ ವಾರೆಂಟ್ ಇಶ್ಯೂ ಆಗಿದ್ದರು ತಲೆಮರೆಸಿಕೊಂಡಿದ್ದ 11 ರೌಡಿಗಳು, ಜೊತೆಗೆ ಅಕ್ರಮವಾಗಿ ಲ್ಯಾಂಡ್ ಡೀಲಿಂಗ್ ಮಾಡುತ್ತಿರುವವರು ಸಹಾ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.

ಇನ್ನು ಪೂರ್ವ ವಲಯದ ಈಶಾನ್ಯ, ಪೂರ್ವ, ಆಗ್ನೇಯ, ವೈಟ್ ಫಿಲ್ಡ್ ವಿಭಾಗದ 648 ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ 1.1 ಕೆಜಿ ಗಾಂಜಾ, 8 ನಂಬರ್ ಪ್ಲೇಟ್ ಇಲ್ಲದ ವಾಹನಗಳು ಪತ್ತೆಯಾಗಿವೆ. ಕೆಲ ಮಾರಕಾಸ್ತ್ರಗಳು, ಜಾಮೀನು ರಹಿತ ವಾರೆಂಟ್ ಇದ್ದರೂ ತಲೆ ಮರೆಸಿಕೊಂಡಿದ್ದ 34 ಜನ ಆರೋಪಿಗಳು ಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಠಾಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಓರ್ವನ ವಿರುದ್ಧ ಕೇಸ್ ದಾಖಲು ಮಾಡಲಾಗಿದ್ದು, 64 ಸಣ್ಣಪುಟ್ಟ ಕೇಸ್ ಗಳು ದಾಖಲಾಗಿವೆ. ಒಟ್ಟಾರೆಯಾಗಿ ನಗರದಾದ್ಯಂತ ಅಪರಾಧ ಕೃತ್ಯ ಕಮ್ಮಿ ಮಾಡೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಮುಂದುವರೆದಿದೆ. ಇಂದು ರೌಡಿಗಳಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ.

ಪ್ರಮುಖ ರೌಡಿಗಳಾದ ಜೊಲ್ಲು ಇಮ್ರಾನ್, ಹುಸೇನ್ ಷರೀಫ್, ಅನೀಸ್, ಜಹೀರ್ ಅಬ್ಬಾಸ್, ಗ್ರಾನೈಟ್ ಸಾಧಿಕ್, ಸಕೀರ್, ಭಿಂಡಿ ಇರ್ಫಾನ್, ಯೂಸುಫ್, ತೌಫಿಕ್, ನೆಲ್ಸನ್, ಆಸಿಫ್ ಮತ್ತಿತರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ರೌಡಿಶೀಟರ್ ಆಸಿಫ್​ನ ಮನೆಯಲ್ಲಿ 105 ಕೆ.ಜಿ ಗಾಂಜಾ, 8 ಗ್ರಾಂ ಎಂಡಿಎಂಎ, ಒಂದು ಡ್ರಾಗರ್, ಒಂದು ತೂಕದ ಯಂತ್ರವನ್ನು ವಶಕ್ಕೆ ಪಡೆಯಲಾಗಿತ್ತು.


Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ