ಉಗರಗೋಳ: ಎಸ್ಎಸ್ಎಲ್ಸಿ ನಂತರ ಅನೇಕ ಆಯ್ಕೆಗಳಿವೆ. ಸಮರ್ಪಕ ಮಾರ್ಗದರ್ಶನ ಮತ್ತು ಜ್ಞಾನದ ಕೊರತೆಯಿಂದ ಮಕ್ಕಳು ಗೊಂದಲದಲ್ಲಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಪಾಲಕರು ಎಚ್ಚರವಹಿಸಬೇಕು ಎಂದು ಇಸ್ರೋ ವಿಜ್ಞಾನಿ
ಸಲೀಮ್ ಹವಾಲ್ದಾರ ಹೇಳಿದರು.
ಇಲ್ಲಿನ ಬಸವಜ್ಯೋತಿ ಪ್ರಾಥಮಿಕ ಶಾಲಾ ಆವರಣದಲ್ಲಿ ರವಿವಾರ ಜರುಗಿದ ಎಸ್ಎಸ್ ಎಲ್ಸಿ ಆಯ್ತು, ಮುಂದೆ- ಎಂಬ ವಿಷಯ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಯುಗದಲ್ಲಿ ಸಂವಹನ ಕೌಶಲ ಅತಿ ಮುಖ್ಯವಾಗಿದೆ. ಇಂಗ್ಲೀಷ ಭಾಷೆ ಕಲಿಕೆಯಲ್ಲಿ ಹಿಂಜರಿಕೆ ಬೇಡ. ಪಾಲಕರು ಸಹ ಮಕ್ಕಳ ಕಲಿಕೆಗೆ ಉತ್ತೇಜನ ನೀಡಬೇಕಿದೆ. ಉಜ್ವಲ ಭವಿಷ್ಯಕ್ಕಾಗಿ ಪರಿಣಿತರಿಂದ ನಿಮ್ಮ ಗುರಿಗೆ ಸರಿ ಹೊಂದುವ ಪದವಿ ಕುರಿತು ಮಾಹಿತಿ ಸಂಗ್ರಹಿಸಿರಿ. ಬೆರಳ ತುದಿಯಲ್ಲಿ ಜಗತ್ತು ತಂದಿಡುವ ಈ ತಂತ್ರಜ್ಞಾನ ಯುಗದಲ್ಲಿ ಕಠಿಣ ಪರಿಶ್ರಮದ ಜೊತೆಗೆ ಹೊಸ ಆವಿಷ್ಕಾರದ ಮನೋಭಾವ, ಶ್ರದ್ಧಾಪೂರ್ವಕವಾಗಿ ಶಿಕ್ಷಣ ಪಡೆದರೆ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಬಹುದು
ಎಂದರು.
ಧಾರವಾಡ ಸೃಷ್ಟಿ ಕಾಲೇಜು ಪ್ರಾಂಶುಪಾಲ ರವಿ ಕ್ಯಾಮನ್ನವರ ಮಾತನಾಡಿ, ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸುವ ಇರಾದೆ ಅತೀ ಅವಶ್ಯ. ಈ ಎಸ್.ಎಸ್.ಎಲ್.ಸಿ ಹಂತ ಮುಂದಿನ ಜೀವನದ ದಿಕ್ಸೂಚಿಯಾಗಿದ್ದು, ಉನ್ನತ ಶಿಕ್ಷಣದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್ಗಳ ಆಯ್ಕೆಗಳಿದ್ದು, ಆಸಕ್ತಿಯಿರುವ ವಿಷಯಗಳ ಕಲಿಕೆಗೆ ಹೊಸ ಶಿಕ್ಷಣ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಲ್ಲ ರಂಗದಲ್ಲಿಯೂ ಪ್ರಾವಿಣ್ಯತೆ ಹೊಂದಲು ವೃತ್ತಿಪರ ಶಿಕ್ಷಣದ ಅಗತ್ಯತೆ ಇದೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಹಂಬಲವಿರಬೇಕು.
ಸರಕಾರದಿಂದ ಎಲ್ಲ ರೀತಿಯ ಉನ್ನತ್ತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ವಸತಿ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ವೃತ್ತಿಪರ ಕೋರ್ಸ್ ಗಳಿಗಾಗಿ ಬ್ಯಾಂಕಿನಿಂದ ಸಾಲ ಸೌಲಭ್ಯದ ವ್ಯವಸ್ಥೆಯೂ ಇದೆ. ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳೇ ಅತೀ ಹೆಚ್ಚು ಅಂಕ ಪಡೆಯುತ್ತಿದ್ದಾರೆ. ಪುಸ್ತಕದೊಟ್ಟಿಗೆ ಒಡನಾಟ, ಅವಕಾಶಗಳ ಸದುಪಯೋಗವಾಗಬೇಕು. ಮಕ್ಕಳಿಗೆ ವೇದಿಕೆ ನಿರ್ಮಿಸುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರದು ಎಂದರು.
ಸವದತ್ತಿ ಸರಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ಎಫ್.ಎಂ. ಹವಾಲ್ದಾರ್ ಮಾತನಾಡಿ, ತಾಂತ್ರಿಕತೆಯ ಬೆಳವಣಿಗೆಯಿಂದ ದೇಶದ ಪ್ರಗತಿ ಸಾಧ್ಯ. ಐಟಿಐ ನಂತರ ಉದ್ಯಮ ನಡೆಸಲು ಸರಕಾರದಿಂದ ಬಡ್ಡಿರಹಿತ ಮತ್ತು ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ಇದೆ. ಸಾಮಾಜಿಕ ಜಾಲತಾಣಗಳು ನಮ್ಮನ್ನು ಸೊಂಬೇರಿಗಳನ್ನಾಗಿಸುತ್ತಿವೆ.
ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಇದ್ದಲ್ಲಿ ಮೊಬೈಲ್ ಬಳಕೆಯಿಂದ ದೂರವಿರಿ ಎಂದರು. ಕಾರ್ಯಕ್ರಮದಲ್ಲಿ ವಿಶ್ವ ತಾಯಂದಿರ ದಿನ ಆಚರಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೇಷಪ್ಪ ಕೊಪ್ಪದ, ಅಕ್ಷರ ದಾಸೋಹದ ಎಡಿ ಆನಂದ ಭೋವಿ, ಪಿಡಿಒ ಮಹೇಶ ತೆಲಗರ, ಪ್ರಶಾಂತ ತೋಟಗಿ, ಐ.ಸಿ. ಉಮರಾಣಿ, ಮಲ್ಲಪ್ಪ ಪತ್ರಾವಳಿ, ಮಲ್ಲಪ್ಪ ಕೇರಿ ಹಾಗೂ ಪ್ರಮುಖರು ಇದ್ದರು.