ಬೀದರ್ : ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪೂರ್ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಹಳ್ಳ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋದ ಘಟನೆ ನಡೆದಿದೆ.
ಸುನಂಧಾ ಸಂಗಪ್ಪ ಲದ್ದೆ, ಮಗ ಸುಮಿತ್ ಹಾಗೂ ಮಗಳು ಐಶ್ವರ್ಯ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗಪ್ಪ ಲದ್ದೆ ಜೊತೆ ಹೊಲಕ್ಕೆ ಹೋಗಿ ವಾಪಸ್ಸಾಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಹಳ್ಳದಲ್ಲಿ ಏಕಾಏಕಿ ನೀರು ಹೆಚ್ಚಾಗಿದ್ದರಿಂದ ತಾಯಿ, ಮಕ್ಕಳು ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಸಂಗಪ್ಪ ಲದ್ದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದ ಔರಾದ್ ತಹಶೀಲ್ದಾರ್ ಮಲ್ಲಿಕಾರ್ಜುನ, ಭಾಲ್ಕಿ ವಿಭಾಗದ ಎಎಸ್ಪಿ ಪೃಥ್ವಿಕ ಶಂಕರ, ಕಮಲನಗರ ಸಿಪಿಐ ಪಂಡಿತ್ ಸಗರ ಹಾಗೂ ಕುಶನೂರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.