ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಪರ ಮೊಮ್ಮಗ ಸಮರ್ಥ್ ಶಾಮನೂರು ಮತಯಾಚನೆ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಪರ ಮತಯಾಚಿಸಿದ ಮೊಮ್ಮಗ ಸಮರ್ಥ್ ದಾವಣಗೆರೆ: ಚುನಾವಣಾ ಕಾವು ದಿನೇ ದಿನೇ ಏರುತ್ತಿದೆ.
ಮತದಾನಕ್ಕೆ ಕೆಲವು ದಿನಗಳು ಬಾಕಿ ಇರುವಾಗಲೇ ಅಭ್ಯರ್ಥಿಗಳು ಹಾಗೂ ಅವರ ಕುಟುಂಬಸ್ಥರು ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರ ಮಾಡ್ತಿದ್ದಾರೆ. ತಮಗೆ ಆಶೀರ್ವದಿಸುವಂತೆ ಮತದಾರರ ಪ್ರಭು ಬಳಿ ಮನವಿ ಮಾಡ್ತಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಪರ ಅವರ ಮೊಮ್ಮಗ ಒಂಟೆ ಮೇಲೆ ಕೂತು ಮತಯಾಚನೆ ಮಾಡಿ ಗಮನ ಸೆಳೆದಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಳಸಪ್ಪನಗಲ್ಲಿ, ವಿಠ್ಠಲ ಮಂದಿರ ಹತ್ತಿರ ಬಳಿ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಪುತ್ರ ಹಾಗೂ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಒಂಟೆ ಮೇಲೆ ಕೂತು ವಿಭಿನ್ನವಾಗಿ ಕಾಂಗ್ರೆಸ್ ಕರಪತ್ರಗಳನ್ನು ಹಂಚುವ ಮೂಲಕ ಅಜ್ಜನಿಗೆ ಆಶೀರ್ವಾದ ಮಾಡುವಂತೆ ಮತದಾರರ ಬಳಿ ಮನವಿ ಮಾಡಿದರು. ಇನ್ನು ಪ್ರಚಾರಕ್ಕೆ ಮನೆಗೆ ಬಂದ ಶಾಮನೂರು ಅವರ ಮೊಮ್ಮಗ ಸಮರ್ಥ್ರನ್ನು ಜನರು ಸ್ವಾಗತಿಸಿಕೊಂಡರು.
ಇತ್ತೀಚೆಗೆ ಮಾಜಿ ಸಿದ್ದರಾಮಯ್ಯ ಅವರ ಮೊಮ್ಮಗ ಧವನ್ ರಾಕೇಶ್ ಕೂಡ ವರುಣಾದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಜೊತೆಗೆ ಅಜ್ಜನ ಪರವಾಗಿ ಮೊದಲ ಬಾರಿಗೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮತಯಾಚಿಸಿದ್ದರು.
ಕೋಗಲೂರಿನಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಪ್ರಚಾರ: ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಸದ್ಯ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಚನ್ನಗಿರಿ ತಾಲೂಕಿನ ಕೋಗಲೂರಿನಿಂದ ಭರ್ಜರಿ ಪ್ರಚಾರ ಮಾಡುವ ಮೂಲಕ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು. ಮಾಯಕೊಂಡ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಅವರು ಕಂದಗಲ್ಲು ಹಾಗೂ ಅಣಜಿ ಭಾಗದಲ್ಲಿ ಪ್ರಚಾರ ನಡೆಸಿದರು.