ಬೆಂಗಳೂರು: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸ್ಪರ್ಧಿಸುವ ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನಾಗಿ ಆರ್ ಅಶೋಕ (R Ashoka) ಅವರನ್ನು ಕಣಕ್ಕಿಳಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಆರ್ ಅಶೋಕ್ ಸ್ಪರ್ಧಿಸುವ ಮತ್ತೊಂದು ಕ್ಷೇತ್ರ ಪದ್ಮನಾಭನಗರದಲ್ಲಿ (Padmanabhanagar) ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡು (Raghunath Naidu) ಅವರಿಗೆ ಬಿ ಫಾರಂ ನೀಡದೆ ಕೋಕ್ ನೀಡುವ ಸಾಧ್ಯತೆ ಇದೆ.
ಟಿಕೆಟ್ ಘೋಷಣೆಯಾದ ಹಿನ್ನೆಲೆ ಬಿ ಫಾರಂ ಪಡೆಯಲು ರಘುನಾಥ್ ನಾಯ್ಡು ಅವರು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಶೋಕ್ ಅವರನ್ನು ಕಣಕ್ಕಿಳಿಸಿದ ಹಿನ್ನೆಲೆ ರಘುನಾಥ್ ನಾಯ್ಡುಗೆ ಡಿಕೆ ಶಿವಕುಮಾರ್ ಬಿ ಫಾರಂ ನೀಡದೆ ಕುತೂಲಹ ಕೆರಳಿಸಿದ್ದಾರೆ.
ಅಶೋಕ ವಿರುದ್ಧ ಡಿಕೆ ಸುರೇಶ್ ಕಣಕ್ಕೆ?
ಇತ್ತ ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ಬಿಜೆಪಿ ಹೈಕಮಾಂಡ್ ಆರ್ ಅಶೋಕ್ ಅವರನ್ನು ಕನಕಪುರದಲ್ಲಿ ಕಣಕ್ಕಿಳಿಸಿದರೆ, ಇತ್ತ ಅದೇ ಅಶೋಕ್ ಅವರನ್ನು ಪದ್ಮನಾಭನಗರದಲ್ಲಿ ಸೋಲುಣಿಸಲು ಕಾಂಗ್ರೆಸ್ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಹಾಕಿಕೊಂಡಿದೆ. ಈ ಹಿಂದೆ ಅಶೋಕ್ ಅವರ ವಿರುದ್ಧ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವುದಾಗಿ ಡಿಕೆ ಶಿವಕುಮಾರ್ ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಇದೀಗ ಹಾಲಿ ಅಭ್ಯರ್ಥಿ ನಾಯ್ಡು ಅವರಿಗೆ ಬಿ ಫಾರಂ ನೀಡದೇ ಇರುವುದು ಇದೇ ಕಾರಣಕ್ಕಾ? ಕಾದುನೋಡಬೇಕಿದೆ.