ಹೊಸಪೇಟೆ (ವಿಜಯನಗರ): ‘ಕುಕ್ಕರ್ ಬಾಂಬ್ ಸ್ಫೋಟವನ್ನು ನಾವೇ ಮಾಡಿದ್ದೇವೆ ಎಂದು ಐಎಸ್ಐಎಸ್ ಸಂಘಟನೆಯವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಈಗ ಐಎಸ್ಐಎಸ್ಗೆ ಸಪೋರ್ಟ್ ಮಾಡ್ತಿರಾ? ತಾಲಿಬಾನ್ಗೆ ಸಪೋರ್ಟ್ ಮಾಡ್ತಿರಾ?
ಅಥವಾ ರಾಜ್ಯದ ಕ್ಷಮೆ ಕೇಳ್ತಿರಾ ಎನ್ನುವುದನ್ನು ತಿಳಿಸಬೇಕು’ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ವಿಜಯನಗರ ಜಿಲ್ಲಾಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಸ್ಫೋಟ ಅದೊಂದು ಸಾಮಾನ್ಯ ಅಪಘಾತ. ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಈ ರೀತಿ ಮಾಡಿದ್ದಾರೆ ಎಂದು ಶಿವಕುಮಾರ್ ಎರಡು ತಿಂಗಳ ಹಿಂದೆ ಹೇಳಿದ್ದರು. ಇವರೇನು ಐಎಸ್ಐಎಸ್ ಬೆಂಬಲಿಗರಾ? ತಾಲಿಬಾನ್ ಬೆಂಬಲಿಗರಾ? ನೀವು ಜನರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನೀವು ಐಎಸ್ಐಎಸ್, ತಾಲಿಬಾನ್ ಜೊತೆಗೆ ಇರುವವರು ಎನ್ನುವುದು ಜನ ತೀರ್ಮಾನಿಸುತ್ತಾರೆ. ಶಿವಕುಮಾರ್ ನೀವು ಕ್ಷಮೆ ಕೇಳಿದರೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇದ್ದೀರಿ ಎಂದರ್ಥ. ಇಲ್ಲದಿದ್ದರೆ ಭಯೋತ್ಪಾದಕರ ಪರ ಇದ್ದೀರಿ ಎಂದರ್ಥ ಎಂದು ಹೇಳಿದರು.
ಇದು ತುಷ್ಟೀಕರಣದ ರಾಜಕಾರಣ. ಹಲವು ವರ್ಷಗಳಿಂದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಮಾಡುತ್ತ ಬಂದಿವೆ. ಜಗತ್ತಿನಲ್ಲಿ ಪಾಕಿಸ್ತಾನ ಪ್ರಾಯೋಜಿತ ಸ್ಫೋಟ, ಭಯೋತ್ಪಾದನೆ ನಡೆಯುತ್ತಿದೆ. ಅದನ್ನು ಏಕಾಂಗಿ ಮಾಡಿ, ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಶ್ರಮಿಸುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಸಾಮಾನ್ಯ ಸ್ಫೋಟವೆಂಬಂತೆ ಮಾತನಾಡುತ್ತಾರೆ ಎಂದರು.