ಬೆಳಗಾವಿ: ನಿವೃತ್ತಿ ವೇಳೆ ಬಿಸಿಯೂಟ ತಯಾರಕ ಸಿಬ್ಬಂದಿಗೆ ಇಡಗಂಟು ಅಥವಾ ನಿವೃತ್ತಿ ವೇತನ ನೀಡಬೇಕೆಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೌಕರರು ಇಲ್ಲಿನ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅವರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಈಗಾಗಲೇ ಸೇವೆಯಿಂದ ಬಿಡುಗಡೆಗೊಳಿಸಿದ 6 ಸಾವಿರ ನೌಕರರಿಗೆ ₹1 ಲಕ್ಷ ಇಡಗಂಟು ನೀಡಬೇಕು. ನಿವೃತ್ತಿ ಹೊಂದಿದ ಅಡುಗೆ ತಯಾರಕ ಸಿಬ್ಬಂದಿ ಕುಟುಂಬದವರಿಗೆ ಕೆಲಸ ನೀಡಬೇಕು. ಅಪಘಾತದಲ್ಲಿ ಮೃತಪಟ್ಟವರ ಅವಲಂಬಿತರಿಗೆ ಪರಿಹಾರ ಕೊಡಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿ ಮುಖ್ಯ ಅಡುಗೆ ತಯಾರಕ ಸಿಬ್ಬಂದಿಯಿಂದ ಎಸ್ಡಿಎಂಸಿಗೆ ವರ್ಗಾಯಿಸಿರುವ ಕ್ರಮ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಲ್.ಎಸ್. ನಾಯಕ, ಜಿ.ಎಂ.ಜೈನೇಖಾನ್, ತುಳಸಮ್ಮ ಮಾಳದಕರ, ಸುಮನ್ ಗಡಾದ, ಪಾರ್ವತಿ ಕೌಜಲಗಿ, ಮಾಸಾಬಿ ಡಾಲಾಯತ್, ಭಾರತಿ ಜೋಗನ್ನವರ ಇತರರಿದ್ದರು.
*
ಮಾದಕವಸ್ತು ಮಾರಾಟ: ಕ್ರಮಕ್ಕೆ ಆಗ್ರಹ
ಬೆಳಗಾವಿ: ನಗರದ ಶಾಲೆ ಮತ್ತು ಕಾಲೇಜಿನ ಸುತ್ತಲಿನ ಪ್ರದೇಶದಲ್ಲಿ ಅಕ್ರಮವಾಗಿ ಮಾದಕವಸ್ತು ಮಾರಾಟ ಮಾಡುತ್ತಿರುವವರ ವಿರುದ್ಧ ಪೊಲೀಸರು ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಈ ಸಂಬಂಧ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
‘ಮಾದಕವಸ್ತು ಹಾವಳಿ ಹೆಚ್ಚಿದ್ದರಿಂದ ಯುವಪೀಳಿಗೆ ದಾರಿ ತಪ್ಪುತ್ತಿದೆ. ಸಮಾಜದಲ್ಲಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮಾದಕವಸ್ತು ಮಾರಾಟ ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಸಂಜಯ ರಜಪೂತ, ಸಂಜೀವ ವಾಜಂತ್ರಿ, ಗೌಸ್ ಸನದಿ ಇದ್ದರು.
*
ಮನೆಗಳ ಹಕ್ಕುಪತ್ರ ವಿತರಿಸಿ
ಬೆಳಗಾವಿ: ಬೈಲಹೊಂಗಲದ ಹರಳಯ್ಯ ಕಾಲೊನಿಯಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ನಮಗೆ ಮನೆಗಳ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಕಾರ್ಯಕರ್ತರು ಡಿ.ಸಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಹರಳಯ್ಯ ಕಾಲೊನಿಯಲ್ಲಿ 50 ಕುಟುಂಬಗಳ ಸದಸ್ಯರು ವಾಸಿಸುತ್ತಿದ್ದೇವೆ. ನಿಯಮಿತವಾಗಿ ಬೈಲಹೊಂಗಲ ಪುರಸಭೆಗೆ ಮನೆ ತೆರಿಗೆ ಪಾವತಿಸುತ್ತಿದ್ದೇವೆ. ನಮಗೆ ಹಕ್ಕುಪತ್ರ ಕೊಡುವಂತೆ ಜಿಲ್ಲಾಡಳಿತಕ್ಕೆ ಹಲವು ಸಲ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು. ಪರಶುರಾಮ ರಾಯಬಾಗ, ಸುರೇಶ ಅಗಾಡೆ, ಮಂಜುನಾಥ ರಾಯಬಾಗ, ಉಮೇಶ ದೊಡ್ಡಮನಿ, ಗೋರೆಸಾಬ್ ಇತರರಿದ್ದರು