ಬೆಂಗಳೂರು: ‘ಕೆಐಎಡಿಬಿಯಿಂದ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಭೂಮಿ ನೀಡಿಕೆಯಲ್ಲಿ ಅವ್ಯವಹಾರವಾಗಿದೆ’ ಎಂದು ವಿಧಾನ ಪರಿಷತ್ನಲ್ಲಿ ಜೆಡಿಎಸ್ನ ಮರಿತಿಬ್ಬೇಗೌಡ ಮಾಡಿದ ಆರೋಪ ಚರ್ಚೆಗೆ ಗ್ರಾಸವಾಯಿತು.
‘ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ಕಟ್ಟಿಕೊಡಲು ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲಿ ಬ್ರಿಗೇಡ್ ರಿಯಲ್ ಎಸ್ಟೇಟ್ ಸಂಸ್ಥೆಗೆ ಕೆಐಎಡಿಬಿಯಿಂದ ಭೂಮಿ ನೀಡಲಾಗಿದೆ.
ಅದರಲ್ಲಿ ಬಡವರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಲಾಗಿತ್ತು. ಆದರೆ, ನಿಯಮ ಪಾಲನೆ ಆಗದಿರುವುದರಿಂದ ಸರ್ಕಾರಕ್ಕೆ ನಷ್ಟವಾಗಿದೆ’ ಎಂದು ಮರಿತಿಬ್ಬೇಗೌಡ ದೂರಿದರು.
ಅದಕ್ಕೆ ಪ್ರತಿಕ್ರಿಯಿಸಿದ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ‘ಕೆಐಎಡಿಬಿ ಭೂಸ್ವಾಧೀನ ಮಾಡಿಕೊಳ್ಳುವ ಜಾಗದಲ್ಲಿ ಶೇ 15ರಷ್ಟು ಭೂಮಿಯನ್ನು ಆಸ್ಪತ್ರೆ, ಶಾಲೆ, ವಸತಿ ಸೇರಿದಂತೆ ಮೂಲಸೌಕರ್ಯಕ್ಕೆ ಬಳಸಲಾಗುತ್ತಿದೆ. ಬ್ರಿಗೇಡ್ ಸಂಸ್ಥೆಗೆ ತಲಾ 25 ಎಕರೆಯಂತೆ ಎರಡು ಬಾರಿ ಭೂಮಿ ನೀಡಲಾಗಿದೆ. ಕೌಶಲ್ಯ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಸಂಸ್ಥೆ ಸ್ಥಾಪಿಸಲು ಈ ಭೂಮಿ ನೀಡಲಾಗಿದೆ. ಅದನ್ನು ಉಚಿತವಾಗಿ ನೀಡಿಲ್ಲ. ಸರ್ಕಾರಕ್ಕೆ ಬರಬೇಕಾದ ಹಣ ಪಡೆಯಲಾಗಿದೆ. ನಿಯಮ ಉಲ್ಲಂಘನೆ ಆಗಿಲ್ಲ’ ಎಂದರು.
ಉತ್ತರದಿಂದ ಸಮಾಧಾನಗೊಳ್ಳದ ಮರಿತಿಬ್ಬೇಗೌಡ, ‘ಮಂತ್ರಿಗಳು ರಾಜ್ಯವನ್ನು ಹರಾಜು ಹಾಕುತ್ತಾರೆ’ ಎಂದರು. ಅದಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ತೇಜಸ್ವಿನಿ ಗೌಡ ಆಕ್ಷೇಪ ವ್ಯಕ್ತಪಡಿಸಿದರು.
‘ಈ ಬಗ್ಗೆ ಚರ್ಚೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು. ಅಲ್ಲದೆ, ಸದನ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಮರಿತಿಬ್ಬೇಗೌಡ ಪಟ್ಟುಹಿಡಿದರು. ಈ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುವು
ದಾಗಿ ಸಭಾಪತಿ ಬಸವರಾಜ ಹೊರಟ್ಟಿ
ಸಮಾಧಾನಪಡಿಸಿದರು.