ಸಿಂದಗಿ: ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ರವಿವಾರ ರಾತ್ರಿ ಮುಖ್ಯೋಪಾಧ್ಯಾಯರೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದ ಸರ್ಕಾರಿ ಎಚ್ಪಿಎಸ್ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಮಲ್ಲಪ್ಪ ನಾಯಕಲ್(54) ನೇಣಿಗೆ ಕೊರಳೊಡ್ಡಿದ ದುರ್ದೈವಿ.
ತನ್ನ ಸಾವಿನ ಬಗ್ಗೆ ಬರೆದಿರುವ ಎರಡು ಪುಟಗಳ ಡೆತ್ ನೋಟ್ನಲ್ಲಿ ಸಿಆರ್ಸಿಯಾಗಿ ಬಡ್ತಿಯಾಗಿರುವ ಶಾಲೆಯ ಹಳೆ ಮುಖ್ಯೋಪಾಧ್ಯಾಯ ಜಿ.ಎನ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಹರನಾಳ, ಸಾಸಾಬಾಳ ಗ್ರಾಮದ ಸಂಗಮೇಶ ಚಿಂಚೊಳ್ಳಿ, ಎಸ್.ಎಲ್.ಬಜಂತ್ರಿ, ಬಿ.ಎಂ.ತಳವಾರ ಅವರ ಹಿಂಸೆಗೆ ಬೇಸತ್ತಿರುವ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮ್ಮ ಡೆತ್ನೋಟ್ನಲ್ಲಿ ‘ಸಿಆರ್ಸಿ ಜಿ.ಎನ್.ಪಾಟೀಲ ಹಾಗೂ ಎಸ್ಎಲ್ ಭಜಂತ್ರಿ ತನಗೆ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಸ್ಥಾನ ಬಿಟ್ಟುಕೊಡುವ ವೇಳೆ, ಸಮರ್ಪಕ ಶಾಲಾ ದಾಖಲಾತಿಗಳನ್ನು ಬರೆಯದೇ, ಇದೇ ವ್ಯಾಪ್ತಿಗೆ ಸಿಆರ್ಸಿ ಆಗಿರುವೆ. ಎಲ್ಲವನ್ನು ಸರಿ ಪಡಿಸಿಕೊಡುವೆ ಎನ್ನುತ್ತ ಕಾಲಕಳೆದರು. ನಾನೇ ಬೆನ್ನು ಬಿದ್ದರೂ ಆ ಕೆಲಸಗಳನ್ನು ಮಾಡಲಿಲ್ಲ.
ಬಿಇಒ ಎಚ್.ಎಂ.ಹರನಾಳ ಇವರಿಗೆ ಈ ವಿಷಯವನ್ನು ಮೌಖಿಕವಾಗಿ ತಿಳಿಸಿದರೂ, ನನ್ನ ಮೇಲೆ ನೋಟೀಸು ಕೊಡುವ ಮೂಲಕ ಟಾರ್ಚರ್ ನೀಡಿದ್ದಾರೆ. ಬಿ.ಎಮ್.ತಳವಾರ ಎಂಬುವನು ಜನರಿಂದ ವಿನಾಕಾರಣ ಫೋನ್ ಮಾಡಿಸಿ, ಶಾಲೆಗೆ ಬಂದು ಅಲ್ಲಿನ ಜನರ ಮುಂದೆ ಟಿಂಗಲ್ ಮಾಡುತ್ತಿದ್ದ. ಸಂಗಮೇಶ ಚಿಂಚೊಳ್ಳಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಹಿಂಸೆ ಕೊಡುವುದಲ್ಲದೇ, ನನ್ನಿಂದ ಹಣವನ್ನು ಕಿತ್ತುಕೊಂಡಿದ್ದಾನೆ. ಇವರೆಲ್ಲರ ನಡುವೆ ಶಾಲಾ ಉಸ್ತುವಾರಿ, ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗದ ಹಿಂಸೆ ನನ್ನನ್ನು ಈ ಸ್ಥಿತಿಗೆ ತಳ್ಳಿದೆ’ ಎಂದು ಬರೆದುಕೊಂಡಿದ್ದಾರೆ.
Laxmi News 24×7