ಬೆಂಗಳೂರು, ಜನವರಿ 20: 2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಗೂ ಮುನ್ನ ಮುಸ್ಲಿಂ ಮತದಾರರನ್ನು ಸೆಳೆಯಲು ಬಿಜೆಪಿ ಕ್ರಮ ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವಥ್ ನಾರಾಯಣ್ ಗುರುವಾರ ಹೇಳಿದ್ದಾರೆ. ಎಲ್ಲಾ ಮುಸ್ಲಿಮರು ಕೆಟ್ಟವರು ಎಂದು ಬಿಜೆಪಿ ಎಂದಿಗೂ ಹೇಳಿಲ್ಲ.
ಆದರೆ, ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದೇ ಸಮುದಾಯವನ್ನು ಓಲೈಸುವ ರೀತಿಯಲ್ಲಿ ನಮ್ಮ ಪಕ್ಷ ಎಂದಿಗೂ ತುಷ್ಟೀಕರಣ ರಾಜಕಾರಣ ಮಾಡಿಲ್ಲ ಎಂದು ಅಶ್ವಥ್ ನಾರಾಯಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಬುಧವಾರ ಶಿವಮೊಗ್ಗದಲ್ಲಿ ಮಾತನಾಡಿದ್ದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ‘ಪ್ರಧಾನಿ ಮೋದಿ ಅವರು ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ತಿಳಿಸಿದ್ದಾರೆ. ಆ ಮೂಲಕ ಕರ್ನಾಟಕದಲ್ಲಿ ಮುಸ್ಲಿಮರ ಮತಗಳನ್ನು ಸೆಳೆಯಲು ಹೇಳಿದ್ದಾರೆ. ಮುಸ್ಲಿಮರ ಮತಗಳೊಂದಿಗೆ ನಾವು ರಾಜ್ಯದಲ್ಲಿ 140 ಸ್ಥಾನಗಳನ್ನು ಗೆಲ್ಲಲಿದ್ದೇವೆ’ ಎಂದು ಹೇಳಿದ್ದರು.
ಮತ ನೀಡುವಂತೆ ಮುಸ್ಲಿಮರಿಗೆ ಮನವರಿಕೆ‘ಹೈದರ್ ಅಲಿ, ಟಿಪ್ಪು ಸುಲ್ತಾನ್ನಂತೆ ಮತಾಂಧ ಎಂದು ನಾವು ಎಂದಿಗೂ ಹೇಳಿಲ್ಲ. ಹೈದರ್ ಅಲಿ ಉತ್ತಮ ಆಡಳಿತಗಾರನಾಗಿದ್ದ. ಆತನ ಮಗ ಮತಾಂಧ ಮತ್ತು ಕನ್ನಡ ವಿರೋಧಿಯಾಗಿದ್ದ. ಇದೇ ಮಾದರಿಯಲ್ಲಿ, ಉತ್ತಮ ಮುಸ್ಲಿಮರಾಗಿರುವ ಮುಸ್ಲಿಮರು ಬಹಳಷ್ಟು ಇದ್ದಾರೆ. ನಾವು ಅವರಿಗೆ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ವಿವರಿಸಲು ಪ್ರಯತ್ನಿಸುತ್ತೇವೆ ಮತ್ತು ಈ ಚುನಾವಣೆಯಲ್ಲಿ ನಮಗೆ ಮತ ನೀಡುವಂತೆ ಮನವರಿಕೆ ಮಾಡುತ್ತೇವೆ’ ಎಂದು ಸಚಿವರು ತಿಳಿಸಿದ್ದಾರೆ.