ನಿನ್ನೆ ತಾನೆ ಮಹಾರಾಷ್ಟ್ರ ಕರ್ನಾಟಕ ಗಡಿ ಸಂಬಂಧ ಕೇಂದ್ರ ಗೃಹ ಸಚಿವ ಅಮೀತ ಷಾ ನೇತೃತ್ವದಲ್ಲಿ ಉಭಯ ರಾಜ್ಯಗಳ ಮೀಟಿಂಗ್ ಮಾಡಿ ಗಡಿ ಖ್ಯಾತೆ ಯಾರು ತೆಗೆಯುವಂತಿಲ್ಲ ಎಂದು ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ಇಂದು ಮತ್ತೇ ಪುಂಡರು ಪುಂಡಾಟಾ ಮೆರೆದಿದ್ದಾರೆ. ಬುಧವಾರ ರಾತ್ರಿ ಪುಂಡರು ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗೆ ಸೇರಿದ ವಾಹನಕ್ಕೆ ಕಲ್ಲು ಹೊಡೆದು ಜಖಂ ಗೊಳಿಸಿದ್ದಾರೆ.
ಬೆಂಗಳೂರಿನಿಂದ ಬೆಳಗಾವಿಗೆ ಚಳಿಗಾಲ ಅಧಿವೇಶನಕ್ಕಾಗಿ ವಾಹನವೊಂದು ಬಂದಿದೆ. ಇದರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸುವರ್ಣಸೌಧದ ಎದುರೇ ಈ ಕೃತ್ಯ ನಡೆದಿದೆ.ಕರ್ನಾಟಕ ಸರ್ಕಾರ ಎಂದು ಈ ಜೀಪ್ನಲ್ಲಿ ಬರೆದುಕೊಂಡಿದ್ದರಿಂದ ವಾಹನವನ್ನು ಅಡ್ಡಗಟ್ಟಿ ಕಲ್ಲು ತೂರಿ ವಿಕೃತಿ ಮೆರೆದಿದ್ದಾರೆ.
ಅಲ್ಲದೆ, ಚಾಲಕ ಚೇತನ್ ಎಂಬುವವರ ಮೇಲೂ ಹಲ್ಲೆಗೆ ಯತ್ನ ಮಾಡಿದ್ದಾರೆ. ಜತೆಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ. ಈ ವೇಳೆ ತಮ್ಮ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆಂದು ಗೊತ್ತಾದ ತಕ್ಷಣವೇ ಚಾಲಕ ಚೇತನ್ ಜೀಪ್ ಚಲಾಯಿಸಿಕೊಂಡು ಹೋಗಿದ್ದು, ಪುಂಡರಿಂದ ತಪ್ಪಿಸಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.