ಧಾರವಾಡ: ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನ ಡಿ. 24ರಿಂದ ಮೂರು ದಿನಗಳ ಕಾಲ ದಾವಣಗೆರೆಯಲ್ಲಿ ನಡೆಯಲಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಹೇಳಿದರು.
‘1904ರಲ್ಲಿ ಹಾನಗಲ್ ಕುಮಾರಸ್ವಾಮಿ ಅವರಿಂದ ಸ್ಥಾಪನೆಗೊಂಡ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಸದ್ಯ 1.75ಲಕ್ಷ ಸದಸ್ಯರಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಮಹಾಸಭಾ ತನ್ನ ಭವನಗಳನ್ನು ಹೊಂದಿದೆ. ಇಂದಿನ ದಿನಮಾನದಲ್ಲಿ ಸಮಾಜದ ಸಂಘಟನೆ ಅತ್ಯಂತ ಮಹತ್ವ ಪಡೆದಿದೆ. ಈ ದಿಸೆಯಲ್ಲಿ ಸಮಾಜವನ್ನು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಂಘಟಿಸುವ ಉದ್ದೇಶದಿಂದ ಮಹಾ ಅಧಿವೇಶನ ನಡೆಸಲಾಗುತ್ತಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
’23ನೇ ಮಹಾ ಅಧಿವೇಶನವನ್ನು ಚಿತ್ರದುರ್ಗ, ಬಳ್ಳಾರಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕಗಳ ಸಹಕಾರದೊಂದಿಗೆ ದಾವಣಗೆರೆ ಜಿಲ್ಲೆ ಆತಿಥ್ಯ ವಹಿಸಿದೆ. ಎಂ.ಬಿ.ಎ.ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ವಿವಿಧ ಮಠಗಳ ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಕೋರಿಶೆಟ್ಟರ ತಿಳಿಸಿದರು.
ಮಹಾಸಭಾದ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತಾಂಬ ಬಸವರಾಜು ಮಾತನಾಡಿ, ‘ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಯುವ, ಮಹಿಳಾ ಅಧಿವೇಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಚನ ಗಾಯನ, ನೃತ್ಯರೂಪಕ, ನಾಟಕಗಳು ಜರುಗಲಿವೆ. ಪುಸ್ತಕಗಳ ಮಳಿಗೆಗಳು, ಕೈಗಾರಿಕೆ, ವಾಣಿಜ್ಯ ಹಾಗೂ ಕೃಷಿ ಸಂಬಂಧಿತ ಮಳಿಗೆಗಳು ಇರಲಿವೆ. ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳ ಬಯಸುವವರು ಡಿ. 10ರೊಳಗಾಗಿ apply.veerashaivamahasabha.in ಅಂತರ್ಜಾಲ ತಾಣದ ಮೂಲಕ ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಬರಲಿರುವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಮಹಿಳಾ ಸದಸ್ಯರು ಆಕಾಂಕ್ಷೆ ಹೊಂದಿದ್ದಾರೆ. ನನ್ನ ಸ್ಪರ್ಧೆಯ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಿದ್ದೇನೆ’ ಎಂದರು.
ಮಹಾಸಭಾದ ಧಾರವಾಡ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ, ದಾವಣಗೆರೆ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸಿದ್ದೇಶಿ, ಸಂಚಾಲಕ ಕೊರಟಿಕೆರೆ ಶಿವಕುಮಾರ, ಜಯಪ್ರಕಾಶ್ ಮಾಗಿ ಇದ್ದರು.