ಡಿ.3ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಆಗಮಿಸಿದ್ರೆ ಆ ಸಂದರ್ಭದಲ್ಲಿ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವೇ ಹೊಣೆ ಆಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಬುಧವಾರ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಪದಾಧಿಕಾರಿಗಳು ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಮಾಧ್ಯಮಗಳ ಜೊತೆಗೆ ಮಾತನಾಡಿದ ದೀಪಕ ಗುಡಗನಟ್ಟಿ ಮಹಾರಾಷ್ಟ್ರ ಸಚಿವರು ಭಾಷಾಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿ ನಾಡದ್ರೋಹಿಗಳ ಜೊತೆಗೆ ಸೇರಿ ಸಭೆ ಮಾಡುತ್ತಿರುವುದಕ್ಕೆ ಕರವೇ ವಿರೋಧಿಸುತ್ತದೆ. ಹೀಗಾಗಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬಾರದು. ಅವರು ಇಲ್ಲಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡಿ ಭಾಷಾ ಸಾಮಾರಸ್ಯಕ್ಕೆ ಧಕ್ಕೆ ತರುವ ಜೊತೆಗೆ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡಲಿದ್ದಾರೆ ಎಂದು ಕಿಡಿಕಾರಿದರು.
ಒಂದು ವೇಳೆ ಮಹಾರಾಷ್ಟ್ರ ಸಚಿವರಿಗೆ ಅವಕಾಶ ಕೊಟ್ಟರೆ ಅದನ್ನು ಕರವೇ ಸಹಿಸುವುದಿಲ್ಲ. ಅವರು ಬಂದರೆ ಅವರಿಗೆ ಸರಿಯಾದ ಪಾಠ ಕಲಿಸುತ್ತೇವೆ. ಅವರ ವಿರುದ್ಧ ಹೋರಾಟ, ಪ್ರತಿಭಟನೆ ಮಾಡುತ್ತೇವೆ. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದ್ರೆ ಅದಕ್ಕೆ ಜಿಲ್ಲಾಡಳಿತ, ಸರ್ಕಾರವೇ ಹೊಣೆ ಆಗುತ್ತದೆ. ಹೀಗಾಗಿ ಅಂತವರಿಗೆ ಕರ್ನಾಟಕ ಗಡಿ ಪ್ರವೇಶ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ದೀಪಕ ಗುಡಗನಟ್ಟಿ ಆಗ್ರಹಿಸಿದರು.
ಬಳಿಕ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಮಾತನಾಡಿ ಇಲ್ಲಿನ ರಾಜಕಾರಣಿಗಳು ಮತಬ್ಯಾಂಕ್ ಹಿನ್ನೆಲೆ ಮೌನಹಿಸಿರಬಹುದು. ಆದರೆ ಮಧ್ಯಕರ್ನಾಟಕ, ದಕ್ಷಿಣ ಕರ್ನಾಟಕದವರು ಯಾಕೆ ಮಾತನಾಡುತ್ತಿಲ್ಲ. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಆಡಳಿತದಲ್ಲಿದೆ. ಡಬಲ್ ಇಂಜಿನ್ ಅಲ್ಲ, ತ್ರಿಬಲ್ ಇಂಜಿನ್ ಇದೆ. ಹೀಗಾಗಿ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಿ ಮಹಾಜನ್ ವರದಿಯೇ ಅಂತಿಮ ಎಂದು ಯಾಕೆ ಹೇಳುತ್ತಿಲ್ಲ. ರಾಜ್ಯದ ರಾಜಕಾರಣಿಗಳಿಗೆ ಯಾವುದೇ ರೀತಿ ಇಚ್ಛಾಶಕ್ತಿ ಇಲ್ಲ. ಮಹಾರಾಷ್ಟ್ರ ರಾಜಕಾರಣಿಗಳನ್ನು ನೋಡಿ ಕಲಿಯಬೇಕು ಎಂದು ಕಿಡಿಕಾರಿದರು.