ಬಾಗಲಕೋಟೆ: ವೃದ್ಧರೊಬ್ಬರು ನುಂಗಿದ್ದ 187 ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಿಂದ ತೆಗೆಯುವಲ್ಲಿ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರಾಗಿರುವ ಡಾ.ಈಶ್ವರ ಕಲಬುರ್ಗಿ, ಡಾ.ಪ್ರಕಾಶ ಕಟ್ಟಿಮನಿ ಅವರೊಂದಿಗೆ ಅರಿವಳಿಕೆ ತಜ್ಞರಾದ ಡಾ.ಅರ್ಚನಾ ಮತ್ತು ಡಾ.ರೂಪಾ ಹುಲಕುಂದೆ ಅವರು ನಾಣ್ಯ ಹೊರ ತೆಗೆದಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗುಸುಗೂರು ತಾಲ್ಲೂಕಿನ ದ್ಯಾಮಪ್ಪ ಹರಿಜನ ಎಂಬ 58 ವರ್ಷ ವಯಸ್ಸಿನವರು ₹5ರ 56 ನಾಣ್ಯ, ₹2ರ 51 ಹಾಗೂ ₹1ರ 80 ನಾಣ್ಯಗಳನ್ನು ನುಂಗಿದ್ದರು. ನಾಣ್ಯಗಳು ಒಂದೂವರೆ ಕಿಲೋ ತೂಕ ತೂಗಿವೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ದ್ಯಾವಪ್ಪನನ್ನು ಕುಟುಂಬದವರು ಇಲ್ಲಿನ ಕುಮಾರ ಆಸ್ಪತ್ರೆಗೆ ದಾಖಲಿಸಿದ್ದರು. ಡಾ. ಈಶ್ವರ ಕಲಬುರ್ಗಿ ಅವರು ಎಕ್ಸ್ರೇ, ಎಂಡೊಸ್ಕೋಪಿ ಮಾಡಿಸಿದಾಗ ನ್ಯಾಣಗಳಿರುವುದು ಪತ್ತೆಯಾಗಿದೆ. ರೋಗಿಯ ಜೀವಕ್ಕೆ ಅಪಾಯ ಇದ್ದದ್ದರಿಂದ ಕೂಡಲೇ ಶಸ್ತ್ರಚಿಕಿತ್ಡ ಮಾಡಿ ನಾಣ್ಯ ತೆಗೆಯುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
‘ನಾಣ್ಯಗಳನ್ನು ಹಲವು ದಿನಗಳಿಂದ ನುಂಗಿರಬಹುದು. ಹೊಟ್ಟೆ ನೋವಿನ ನಂತರ ಆಸ್ಪತ್ರೆಗೆ ಬಂದಿದ್ದಾರೆ. ತಪಾಸಣೆ ನಡೆಸಿದಾಗ ಗೊತ್ತಾಯಿತು. ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ಡಾ. ಈಶ್ವರ ಕಲಬುರ್ಗಿ ತಿಳಿಸಿದರು.
Laxmi News 24×7