ಮುಂಬೈ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಮಾಹಿತಿ ನೀಡಿದ್ದಾರೆ.
ನವೆಂಬರ್ 11 ರಂದು ಈ ಇಬ್ಬರು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲು ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿಯ ಜಯಂತ್ ಪಾಟೀಲ್, ಸಂಸದೆ ಸುಪ್ರಿಯಾ ಸುಳೆ ಹಾಗೂ ಜಿತೇಂದ್ರ ಔಹಾದ್ ನವೆಂಬರ್ 10 ರಂದು ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಚವಾಣ್ ಮಾಹಿತಿ ನೀಡಿದ್ದಾರೆ.
ಸೆ.7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿದ್ದ ಭಾರತ್ ಜೋಡೊ ಯಾತ್ರೆ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ದಾಟಿ ಸೋಮವಾರ ಸಂಜೆ ಮಹಾರಾಷ್ಟ್ರಕ್ಕೆ ಪ್ರವೇಶ ಮಾಡಿತ್ತು.
ಮಹಾರಾಷ್ಟ್ರದಲ್ಲಿ ಒಟ್ಟು 382 ಕಿ.ಮಿ ದೂರವನ್ನು ಯಾತ್ರೆ ಕ್ರಮಿಸಲಿದೆ. 15 ವಿಧಾನಸಭೆ ಹಾಗೂ 6 ಲೋಕಸಭೆ ಕ್ಷೇತ್ರಗಳಲ್ಲಿ ಹಾದು ಹೋಗುವ ಯಾತ್ರೆಯು ರಾಜ್ಯದಲ್ಲಿ 15 ದಿನ ಸಾಗಲಿದೆ.