ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಬಂಧ ಹಳಸಿಕೊಂಡು ಬಿಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ನಾನ್ನ ಮತ್ತು ಡಿ.ಕೆ.ಶಿವಕುಮಾರ ಸಂಬಂದ ಚೆನ್ನಾಗಿಯೇ ಇದೆ. ಆದರೆ ಬಿಜೆಪಿಯವರು ಸರಿ ಇಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಸಂಬಂಧ ಸರಿ ಇದೆಯಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯಗೆ ಯಾವುದೇ ಕ್ಷೇತ್ರ ಸಿಗುತ್ತಿಲ್ಲ ಎಂಬ ಬಿಜೆಪಿ ನಾಯಕರ ಟೀಕೆಗೆ ಯಾವುದೂ ಕ್ಷೇತ್ರ ಇಲ್ಲದೇ ಹೋದರೆ ಬಹಳ ನನ್ನ ಯಾಕೆ ಕರೆಯುತ್ತಿದ್ದರು. ಬಿಜೆಪಿಯವರಿಗೆ ಬುದ್ಧಿ ಇಲ್ಲ ಹೀಗಾಗಿ ಮಾತನಾಡುತ್ತಿದ್ದಾರೆ. ಬದಾಮಿಯಲ್ಲಿಯೇ ನಿಲ್ಲಬೇಕು ಎಂಬ ಒತ್ತಡ ಬಹಳಷ್ಟಿದೆ. ಸಾವಿರಾರು ಹೆಣ್ಣು ಮಕ್ಕಳು ಮನೆ ಮುಂದೆ ಕುಳಿತುಕೊಳ್ಳುತ್ತೇವೆ ಎಂದು ಒತ್ತಡ ಹಾಕಿ ಪತ್ರ ಬರೆಯುತ್ತಿದ್ದಾರೆ. ನಾನು ಯಾಕೆ ಯೋಚನೆ ಮಾಡುತ್ತಿದ್ದೇನೆ ಎಂದರೆ ಪ್ರತಿ ವಾರಕ್ಕೆ ಒಮ್ಮೆ ಅಲ್ಲಿ ಇರಲು ಆಗೋದಿಲ್ಲ. ದಿನವೂ ಕಾರ್ಯಕರ್ತತರಿಗೆ ಸಿಗಲು ಆಗೋದಿಲ್ಲ. ಅವರ ಕಷ್ಟ ಸುಖಗಳಿಗೆ ಸ್ಪಂದಿಸಲು ಆಗೋದಿಲ್ಲ. ಬೇರೆ ಕೆಲಸ ಇರೋದರಿಂದ ತೊಂದರೆ ಆಗುತ್ತಿದೆ. ಆದರೆ ಅವರು ನೀವು ದಿನನಿತ್ಯ ಬರಬೇಡಿ, ಆದರೆ ಇಲ್ಲಿಯೇ ನಿಲ್ಲಿ ಎನ್ನುತ್ತಿದ್ದಾರೆ. ಆದರೆ ನನಗೆ ಮನಸ್ಸು ಒಪ್ಪುತ್ತಿಲ್ಲ. ನಾನು ಈಗ ಬದಾಮಿಗೆ ಹೋಗಿ ಎರಡು ತಿಂಗಳು ಆಗಿದೆ ಎಂದರು. ಕೋಲಾರ, ವರುಣಾ, ಚಾಮರಾಜನಗರ ಸೇರಿ ಬೇರೆ ಬೇರೆ ಕ್ಷೇತ್ರಗಳಿಂದ ನಿಲ್ಲುವಂತೆ ಬೇಡಿಕೆ ಬರುತ್ತಿದೆ
ವರುಣಾದಿಂದ ನಿಲ್ಲುವುದು ಒಳ್ಳೆಯದು ಎಂದು ಸಿ.ಎಂ.ಇಬ್ರಾಹಿಂ ಸಲಹೆಗೆ ಇಬ್ರಾಹಿಂ ನನಗೆ ಒಳ್ಳೆಯ ಗೆಳೆಯ. ಈಗ ನನ್ನ ಬಿಟ್ಟು ಹೋಗಿ, ಜೆಡಿಎಸ್ ಅಧ್ಯಕ್ಷರಾಗಿದ್ದಾರೆ. ಭದ್ರಾವತಿಯಲ್ಲಿ ಅಪ್ಪಾಜಿಗೌಡ ನಿಧನರಾದ ಹಿನ್ನೆಲೆ ಇಬ್ರಾಹಿಂ ಜೆಡಿಎಸ್ನಿಂದ ಅಲ್ಲಿಯೇ ಸ್ಪರ್ಧಿಸಲಿ. ಇನ್ನು ನಾನು ಎಲ್ಲಿ ನಿಲ್ಲಬೇಕು ಎನ್ನುವುದನ್ನು ಜೆಡಿಎಸ್ ತೀರ್ಮಾನಿಸುವುದಿಲ್ಲ. ನಮ್ಮ ಪಕ್ಷ ತೀರ್ಮಾನಿಸುತ್ತದೆ. ಭದ್ರಾವತಿಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ಇಬ್ರಾಹಿಂಗೆ ಟಿಕೆಟ್ ಕೊಟ್ಟಿದ್ದೇವು. ಆದರೆ ಅವರ ಡಿಫಾಸಿಟ್ ಹೋಗಿ ಬಿಟ್ಟಿತಲ್ಲ. ಹೀಗಾಗಿ ಅವರ ಲೆಕ್ಕಾಚಾರ ಸರಿ ಇಲ್ಲ ಎಂದು ಲೇವಡಿ ಮಾಡಿದರು. ಇನ್ನು ನಾನು ಒಬ್ಬಂಟಿಯಾಗಿದ್ದರೆ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿ ಹಲವು ನಾಯಕರು ಇಲ್ಲಿಯೇ ಇದ್ದಾರೆ, ನಮ್ಮ ಜೊತೆ ಸರ್ವ ಜನಾಂಗ, ಜಾತಿಯವರು ಇದ್ದಾರೆ ಎಂದರು.