ಬೆಂಗಳೂರು: ‘ರಾಜ್ಯದ ಎಲ್ಲ ರಂಗಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡ್ಡಾಯಗೊಳಿಸಲು ಕಾನೂನು ರಚನೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಡಿಸೆಂಬರ್ನಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಲು ಕಾನೂನು ರಚನೆ ಮಾಡುವ ಮಸೂದೆ ಮಂಡಿಸಿ, ಅನುಮೋದನೆ ಪಡೆದುಕೊಳ್ಳಲಾಗುವುದು’ ಎಂದರು.
‘ಕನ್ನಡ ಭಾಷೆಗೆ ಕಾನೂನಿನ ಕವಚ ನೀಡುತ್ತಿರುವ ಮೊದಲ ಸರ್ಕಾರ ನಮ್ಮದು. ಈ ಕಾನೂನು ರಚನೆಯ ಬಗ್ಗೆ ಮುಕ್ತ ಚರ್ಚೆ, ಸಂವಾದಗಳು ನಡೆಯಲಿವೆ. ಸಲಹೆಗಳನ್ನು ಸರ್ಕಾರ ಮುಕ್ತವಾಗಿ ಸ್ವೀಕರಿಸಲಿದೆ’ ಎಂದರು.
‘ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮುಂದಿನ 2 ವರ್ಷಗಳಲ್ಲಿ ಈ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗುವುದು. ಈ ವರ್ಷ ಒಂದು ಲಕ್ಷ ಉದ್ಯೋಗ ನೀಡುವುದರ ಮೂಲಕ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ರಾಂತಿ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
‘ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಕಾಲ ಶುರುವಾದ ಮೇಲೆ ಅಂತಃಕರಣ ಮರೆತಿರುವ ಈ ಹೊತ್ತಿನಲ್ಲಿ, ನಾವು ಇದನ್ನು ಉಳಿಸಿಕೊಂಡು ಹೊಸ ಸವಾಲುಗಳನ್ನು ಎದುರಿಸಬೇಕು. ಕನ್ನಡಿಗರದ್ದು ಅಂತಃಕರಣವುಳ್ಳ ಸಂಸ್ಕೃತಿ. ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ, ತಂತ್ರಜ್ಞಾನ, ತಂತ್ರಾಂಶ, ವಿಜ್ಞಾನ ಹಾಗೂ ಮೂಲಸೌಕರ್ಯ ಇರುವ ಭವಿಷ್ಯ ನಿರ್ಮಿಸುವ ಸಂಕಲ್ಪ ಮಾಡೋಣ’ ಎಂದರು.