ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಟಿ ಸಮಾವೇಶ ಆಯೋಜನೆಗೆ ಕಾಂಗ್ರೆಸ್ ಯೋಜನೆ ಹಾಕಿಕೊಂಡಿದ್ದು, ಆ ಮೂಲಕ ಬಿಜೆಪಿಯ ಎಸ್ಟಿ ಸಮಾವೇಶಕ್ಕೆ ಟಕ್ಕರ್ ನೀಡಲು ಕೈ ನಾಯಕರು ಮುಂದಾಗಿದ್ದಾರೆ. ಮಧ್ಯ ಕರ್ನಾಟಕ ಭಾಗದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆಗೆ ಚಿಂತನೆ ನಡೆಸಲಾಗಿದೆ. ಇದಕ್ಕೂ ಮೊದಲು ಹಿಂದುಳಿದ ವರ್ಗದ ನಾಯಕರ ರಾಜ್ಯ ಪ್ರವಾಸವೂ ನಡೆಯಲಿದ್ದು, ಆ ಮೂಲಕ ಎಸ್ಸಿ, ಎಸ್ಟಿ ಮತ್ತು ಓಬಿಸಿ ಸಮುದಾಯವನ್ನು ತಲುಪಲು ಕಾಂಗ್ರೆಸ್ ಕಸರತ್ತು ನಡೆಸಲಿದೆ. ಇದರೊಂದಿಗೆ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ದಲಿತ ಸಮಾವೇಶವನ್ನು ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳವಾದ ಬೆನ್ನಲ್ಲೆ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ನ.6ರಂದು ರಾಜ್ಯಮಟ್ಟದ ಬೃಹತ್ ಎಸ್ಟಿ ಸಮಾವೇಶವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಮೀಸಲಾತಿ ಹೆಚ್ಚಳ ಮಾಡಿರುವುದು ಬಿಜೆಪಿ ಎಂಬ ಮಾಹಿತಿಯನ್ನು ಮನೆ ಮನೆಗೆ ಮುಟ್ಟಿಸಲು ಯೋಜನೆ ರೂಪಿಸಿದೆ.