ಈ ವರ್ಷ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಣೆ ಮಾಡುವುದು ನಿಮ್ಮ ಜವಾಬ್ದಾರಿ. ಅಕಸ್ಮಾತ ನೀವು ಅದ್ಧೂರಿಯಾಗಿ ಆಚರಣೆ ಮಾಡಲು ಅವಕಾಶ ಮಾಡಿಕೊಡದಿದ್ರೆ ಬರುವ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ಗೆ ಯುವ ಕನ್ನಡ ಹೋರಾಟಗಾರ ಸಂಪತ್ಕುಮಾರ್ ದೇಸಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿಯಲ್ಲಿ ಕ್ಷಣಗಣನೇ ಶುರುವಾಗಿದೆ. ಈ ಬಾರಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲು ಕನ್ನಡ ಸಂಘಟನೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಡಾಲ್ಬಿ ಹಚ್ಚಲು ಜಿಲ್ಲಾಡಳಿತ ಅವಕಾಶ ನೀಡದೇ ಇರುವುದು ಮತ್ತು ಸ್ಥಳೀಯ ಶಾಸಕರು ರಾಜ್ಯೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸದೇ ಇರುವುದು ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಗುರುವಾರ ಡಿಸಿ ಕಚೇರಿಗೆ ಆಗಮಿಸಿದ ಕನ್ನಡ ಹೋರಾಟಗಾರರು ಡಾಲ್ಬಿ ಹಚ್ಚಲು ಅವಕಾಶ ನೀಡುವಂತೆ ಮತ್ತು ಸ್ಥಳೀಯ ಶಾಸಕರು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆಯ ಜವಾಬ್ದಾರಿ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಕನ್ನಡ ಹೋರಾಟಗಾರ ಸಂಪತ್ಕುಮಾರ್ ದೇಸಾಯಿ ಪ್ರತಿವರ್ಷ ನಾವು ಡಿಜೆ ಹಚ್ಚಿ ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವು. ಆದರೆ ಈ ವರ್ಷ ನಮಗೆ ಸುಪ್ರೀಂಕೋರ್ಟ ಆದೇಶದ ನೆಪವನ್ನು ಹೇಳಲಾಗುತ್ತಿದೆ. ಆ ಕಾರಣಕ್ಕಾಗಿ ಎರಡೆರಡು ಡಾಲ್ಬಿಗಳನ್ನು ಮಾತ್ರ ಹಚ್ಚಬೇಕು. ಇಲ್ಲದಿದ್ರೆ ನಿಮ್ಮ ಗಾಡಿ ಜಪ್ತಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ಆದರೆ ಸುಪ್ರೀಂಕೋರ್ಟ ಆದೇಶವು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ಮಾತ್ರ ಸಿಮೀತವಾಗಿದೆಯಾ..? ಗಣೇಶೋತ್ಸವ, ದಾಂಡಿಯಾ, ಶಿವಜಯಂತಿ, ವಾಲ್ಮೀಕಿ ಜಯಂತಿ, ಧಾರವಾಡದಲ್ಲಿ ಈದ್ ಮಿಲಾದ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇಲ್ಲೆಲ್ಲಾ ಸುಪ್ರೀಂಕೋರ್ಟ ಆದೇಶ ಪಾಲನೆ ಆಗಿಲ್ಲ. ಆದರೆ ನಮ್ಮ ಕರ್ನಾಟಕ ರಾಜ್ಯೋತ್ಸವಕ್ಕೆ ಮಾತ್ರ ಇದು ಯಾಕೆ ಎಂದು ಪ್ರಶ್ನಿಸಿದರು.