ಗುಳೇದಗುಡ್ಡ: ತಾಲ್ಲೂಕಿನ ನಾಗರಾಳ ಎಸ್.ಪಿ ಗ್ರಾಮದಲ್ಲಿ ತೃತೀಯ ಲಿಂಗಿಗಳನ್ನು ಸ್ವಸಹಾಯ ಸಂಘದ ಸದಸ್ಯರನ್ನಾಗಿಸಿ, ಸ್ವಯಂ ಉದ್ಯೋಗಕ್ಕಾಗಿ ಸಾಲ ನೀಡಿರುವ ಜಿಲ್ಲಾ ಪಂಚಾಯಿತಿ, ಅವರು ಸ್ವಾವಲಂಬಿಗಳಾಗಲು ಅವಕಾಶ ಮಾಡಿಕೊಟ್ಟಿದೆ.
ಸಂಘದಲ್ಲಿ ಇಂತಹ 20 ಸದಸ್ಯರಿದ್ದು, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ.
ಅವರು ಸಾಲವನ್ನೂ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ.
ಬಾಗಲಕೋಟೆ ಜಿ.ಪಂ ಸಿಇಒ ಟಿ. ಬೂಬಾಲನ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ನಿರ್ವಹಣೆ ಮಿಷನ್ (ಎನ್ಆರ್ಎಲ್ಎಂ) ತಾಲ್ಲೂಕು ಪ್ರೋಗ್ರಾಮರ್ ಗುರುಲಿಂಗಯ್ಯ ಗೌಡರ ಅವರು ಜಿಲ್ಲಾ ಪಂಚಾಯಿತಿಯಲ್ಲಿ ತೃತೀಯಲಿಂಗಿಗಳ ಸಭೆ ನಡೆಸಿ, ನಾಗರಾಳ ಎಸ್.ಪಿ ಗ್ರಾಮದಲ್ಲಿ ತೃತೀಯ ಲಿಂಗಿಗಳ ಮನವೊಲಿಸಿ ಅವರದ್ದೇ ಮಂಗಳಾದೇವಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘವನ್ನು ರಚಿಸಿದರು. ಬ್ಯಾಂಕ್ ಖಾತೆ ಸಹ ತೆರೆದ ಅವರು ಎನ್ಆರ್ಎಲ್ಎಂ ಯೋಜನೆಯಡಿ ಕಮ್ಯುನಿಟಿ ಬಂಡವಾಳ ನಿಧಿಯಾಗಿ ₹ 1.50 ಲಕ್ಷವನ್ನು ಶೂನ್ಯ ಬಡ್ಡಿ ದರದಲ್ಲಿ ಕಳೆದ ಮೇ ತಿಂಗಳಲ್ಲಿ ನೀಡಿದ್ದಾರೆ.
ಆಗಿನ ಬಾಗಲಕೋಟೆಯ ಯೋಜನಾ ಅಭಿವೃದ್ಧಿ ಅಧಿಕಾರಿ ಎಂ.ವಿ. ಚಳಗೇರಿ ಅವರೇ ಖುದ್ದಾಗಿ ಸಂಘದ ಸದಸ್ಯರಿಗೆ ಮೇಕೆಗಳನ್ನು ಖರೀದಿಸಿ ಕೊಟ್ಟಿದ್ದರು. ಪಶು ಇಲಾಖೆಯಿಂದ ಎಲ್ಲ ಮೇಕೆಗಳಿಗೆ ವಿಮೆ ಮಾಡಿಸಲಾಗಿದೆ. ಮೇಕೆ ಸಾಕಾಣಿಕೆಗೆ ಬೇಕಾದ ಶೆಡ್ ಅನ್ನು ನರೇಗಾ ಯೋಜನೆಯಡಿ ₹ 68 ಸಾವಿರ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ನಾಲ್ಕು ಶೆಡ್ಗಳ ನಿರ್ಮಾಣ ಪೂರ್ಣಗೊಂಡಿದೆ.