ಬೆಳಗಾವಿ: ಇಲ್ಲಿನ ಮಾರುತಿ ನಗರದಿಂದ ಶಿಂಧೊಳ್ಳಿ ಕ್ರಾಸ್ವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ₹21.82 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ರಾಯಚೂರು-ಬಾಚಿ ರಾಜ್ಯ ಹೆದ್ದಾರಿಯಲ್ಲಿನ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ‘ಇದು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಗರದ ಮುಖ್ಯರಸ್ತೆಯಾಗಿದೆ. ಜನರಿಗೆ ಅನುಕೂಲವಾಗಲೆಂದು ಇದನ್ನು ಅಭಿವೃದ್ಧಿಪಡಿಸುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಸೂಚನೆ ನೀಡಿದರು.
‘ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದರು.
ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಢೋಣಿ, ಬಸವರಾಜ ಮೋದಗೇಕರ್, ಶ್ರೇಯಸ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಯಿಕ, ಗುತ್ತಿಗೆದಾರ ಮಂಜುನಾಥ ಗರಗ, ನಾಗೇಶ ಲಂಗರಖಂಡೆ, ಸದಾನಂದ ಗುಂಟೆಪ್ಪನವರ, ಅಶೋಕ ಥೋರಾಟ್, ದೀಪಾ ಕುಡಚಿ, ನಿಖಿಲ ಮುರ್ಕುಟೆ, ಮಹಾದೇವ ರಾಠೋಡ, ಗುರುದೇವ ಪಾಟೀಲ, ಪ್ರಸಾದ ದೇವರಮನಿ, ವಿಜಯ ಕದಂ, ವಿನೋದ ಲಂಗೋಟಿ, ಸುನೀಲ ಮಯಾನಾಚೆ ಉಪಸ್ಥಿತರಿದ್ದರು.
Laxmi News 24×7