Home / ರಾಜಕೀಯ / ಮೈಸೂರು ಅರಮನೆಯಲ್ಲಿ ಸೆ.26ರಿಂದ ಖಾಸಗಿ ದರ್ಬಾರ್​

ಮೈಸೂರು ಅರಮನೆಯಲ್ಲಿ ಸೆ.26ರಿಂದ ಖಾಸಗಿ ದರ್ಬಾರ್​

Spread the love

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಇದರ ನಡುವೆಯೇ ರಾಜವಂಶಸ್ಥರು ನಡೆಸುವ ನವರಾತ್ರಿ ಉತ್ಸವಕ್ಕೂ ಸಿದ್ಧತೆ ಶುರುವಾಗಿದೆ. ಮಂಗಳವಾರ ಅಂಬಾವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಸಂಪ್ರದಾಯಬದ್ಧವಾಗಿ ನೆರವೇರಿತು.

 

ಅರಮನೆಯ ನೆಲಮಾಳಿಗೆಯ ಖಜಾನೆಯಲ್ಲಿ ಭದ್ರವಾಗಿ ಇಡಲಾಗಿದ್ದ ಸಿಂಹಾಸನವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್​ ಸಮ್ಮುಖದಲ್ಲಿ ಹೊರ ತೆಗೆಯಲಾಯಿತು. ಬಿಡಿಬಿಡಿಯಾಗಿದ್ದ ಸಿಂಹಾಸನದ ಭಾಗಗಳನ್ನು ಬಿಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ದರ್ಬಾರ್​ ಹಾಲ್​ಗೆ ತರಲಾಯಿತು. ದರ್ಬಾರ್​ ನಡೆಯುವ ಹಾಲ್​ನಲ್ಲಿ ಶುಭ ವೃಶ್ಚಿಕ ಲಗ್ನದಲ್ಲಿ ಆಸನ, ಮೆಟ್ಟಿಲು, ಛತ್ರಿ ಮುಂತಾದ ಬಿಡಿ ಭಾಗಗಳನ್ನು ಜೋಡಿಸಲಾಯಿತು. ಸಂಪ್ರದಾಯದಂತೆ ಈ ಹಿಂದಿನಿಂದಲೂ ಸಿಂಹಾಸನ ಜೋಡಣೆ ಕಾರ್ಯ ಮಾಡಿಕೊಂಡು ಬರುತ್ತಿರುವ ಗೆಜ್ಜಗಹಳ್ಳಿ ಗ್ರಾಮಸ್ಥರು ಈ ಬಾರಿಯೂ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ರತ್ನಖಚಿತ ಸಿಂಹಾಸನವನ್ನು ಬಿಳಿ ವಸದಲ್ಲಿ ಸಂಪೂರ್ಣ ಮುಚ್ಚಲಾಯಿತು.

ರಾಜಪರಂಪರೆಯ ಸಂಪ್ರದಾಯದಂತೆ ನವರಾತ್ರಿಯಲ್ಲಿ ಖಾಸಗಿ ದರ್ಬಾರ್​ ನಡೆಸುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.
ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಸಂಬಂಧ ಮಾಹಿತಿ ನೀಡಲು ಕರಿಕಲ್ಲು ತೊಟ್ಟಿ, ವರಹಾಸ್ವಾಮಿ ದ್ವಾರ, ಪಾರ್ಕಿಂಗ್ ಸ್ಥಳಗಳಲ್ಲಿ ಫಲಕಗಳನ್ನು ಹಾಕಲಾಗಿತ್ತು. ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ರಾಜ್ಯ ಸರ್ಕಾರ ನಾಡಹಬ್ಬ ಹೆಸರಿನಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಆಚರಿಸಿದರೆ, ರಾಜವಂಶಸ್ಥರು ಸಾಂಪ್ರದಾಯಿಕವಾಗಿ ನವರಾತ್ರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ. ಕಂಕಣಧಾರಿಯಾದ ರಾಜವಂಶಸ್ಥ ಸಿಂಹಾಸನದ ಮೇಲೆ ಕುಳಿತು ದರ್ಬಾರ್ ನಡೆಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

26ರಿಂದ ಖಾಸಗಿ ದರ್ಬಾರ್​: ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಖಾಸಗಿ ದರ್ಬಾರ್​ ಸೆ.26ರಿಂದ 9 ದಿನಗಳವರೆಗೆ ಅರಮನೆಯಲ್ಲಿ ನಡೆಯಲಿದೆ. ಈಗ ಸಜ್ಜುಗೊಂಡಿರುವ ಸಿಂಹಾಸನದ ಕಾಲುಗಳಿಗೆ ಸಿಂಹದ ಮುಖಗಳನ್ನು ನವರಾತ್ರಿ ಆರಂಭದ ದಿನ ಶಾಸ್ತ್ರೋಕ್ತವಾಗಿ ಜೋಡಣೆ ಮಾಡಲಾಗುತ್ತಿದೆ. ಬಳಿಕ ರತ್ನ ಖಚಿತ ಸಿಂಹಾಸನಾರೂಢರಾಗಿ ರಾಜವಶಂಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಖಾಸಗಿ ದರ್ಬಾರ್​ ನಡೆಸಲಿದ್ದಾರೆ. ದಸರಾ ಮುಗಿದ ಬಳಿಕವೂ ಕೆಲ ದಿನಗಳು ಸಾರ್ವಜನಿಕ ವೀಕ್ಷಣೆಗೆ ರತ್ನಖಚಿತ ಸಿಂಹಾಸನ ದರ್ಬಾರ್​ ಹಾಲ್​ನಲ್ಲಿ ಇರಲಿದ್ದು, ಅ.20ರಂದು ತೆರವು ಮಾಡಲಾಗುತ್ತದೆ. ಒಟ್ಟಾರೆ ಕೋವಿಡ್ ಕಾರಣದಿಂದ ಕಳೆದ ಎರಡೂ ವರ್ಷ ರಾಜವಂಶಸ್ಥರೂ ಸರಳವಾಗಿ ಖಾಸಗಿ ದಸರಾ ಮಾಡಿದ್ದರು. ಈ ಬಾರಿ ಅದ್ದೂರಿಯಾಗಿ ನೆರವೇರಲಿದ್ದು, ಅರಮನೆಯ ಆಪ್ತರಿಗೆ ಮಾತ್ರ ದರ್ಬಾರ್ ನೋಡುವ ಅವಕಾಶ ಸಿಗಲಿದೆ.


Spread the love

About Laxminews 24x7

Check Also

ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು

Spread the love ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ