ಬೀಜಿಂಗ್/ನವದೆಹಲಿ, ಜು.7- ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಭಾರತದ ಯೋಧರ ದಾಳಿಗೆ ನೂರಕ್ಕೂ ಹೆಚ್ಚು ಚೀನಿ ಸೈನಿಕರು ಹತರಾಗಿದ್ದಾರೆ ಎಂಬ ಸಂಗತಿ ಮತ್ತೊಮ್ಮೆ ದೃಢಪಟ್ಟಿದೆ.
ಲಡಾಖ್-ಲಡಾಯಿಯಲ್ಲಿ ಚೀನಾದ 150ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆಂದು ಕಮ್ಯುನಿಸ್ಟ್ ದೇಶದ ರಾಜಕಾರಣಿಗಳು ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಚೀನಾದ ನಿವೃತ್ತ ಉನ್ನತ ಸೇನಾಧಿಕಾರಿ ಜಿಯಾನ್ಲಿ ಯಾಂಗ್ ಸಹ ಇದೇ ಮಾತನ್ನು ಖಚಿತಪಡಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಸಂಘರ್ಷದಲ್ಲಿ ಭಾರತದ 20 ಯೋಧರು ಹತರಾಗಿದ್ದರೆ, ನಮ್ಮ ಸೇನೆಯ ನೂರಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಜಿಯಾನ್ಲಿ ಯಾಂಗ್ ಅವರ ಹೇಳಿಕೆಗೆ ಚೀನಾದ ಕೆಲವು ಮುಖಂಡರು ಮತ್ತು ನಿವೃತ್ತ ಸೇನಾಧಿಕಾರಿಗಳು ಸಹ ಸಾಥ್ ನೀಡಿದ್ದಾರೆ.
ಈ ದಾಳಿಯಲ್ಲಿ ತಮ್ಮವರು ಹತರಾಗಿಲ್ಲ ಎಂದು ಆರಂಭದಲ್ಲಿ ಹೇಳಿಕೆ ನೀಡಿದ ಚೀನಾ ನಂತರ ಅಧಿಕಾರಿ ಸೇರಿದಂತೆ 35 ಮಂದಿ ಬಲಿಯಾದರು ಎಂದು ತಿಳಿಸಿತ್ತು. ತಮ್ಮ ಪ್ರಬಲ ಪಿಎಲ್ಎ ಸೇನೆಯ ಯೋಧರು ಭಾರೀ ಸಂಖ್ಯೆಯಲ್ಲಿ ಹತರಾದರೆಂಬ ವಿಷಯವನ್ನು ಬಹಿರಂಗಗೊಳಿಸಿದರೆ ತಮ್ಮ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ ಅಧ್ಯಕ್ಷ ಕ್ಸಿ ಜಿಂಗ್ಪಿಂಗ್ ವಾಸ್ತವ ಸಂಗತಿಯನ್ನು ಮರೆಮಾಚಿದ್ದ ಸತ್ಯ ಈಗ ಮತ್ತೊಮ್ಮೆ ಬಟಾಬಯಲಾಗಿದೆ.
ಭಾರತದ ಪರ ಚೀನಿಯರ ಒಲವು: ಗಾಲ್ವಾನ್ ಸಂಘರ್ಷದ ಬಗ್ಗೆ ಚೀನಾದ ಅನೇಕ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯರು ಶಾಂತಿಪ್ರಿಯರು. ಚೀನಿಯರ ಬಗ್ಗೆ ಅವರಿಗೆ ತುಂಬಾ ಸ್ನೇಹಭಾವ ಇದೆ. ಇದೇ ಕಾರಣಕ್ಕಾಗಿ ನಮ್ಮ ಉತ್ಪನ್ನಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಆದರೆ, ವಿಸ್ತರಣಾವಾದಿ ಧೋರಣೆ ಹೊಂದಿರುವ ಕಮ್ಯುನಿಸ್ಟ್ ಸರ್ಕಾರದಿಂದಾಗಿ ಉಭಯ ದೇಶಗಳ ಸಂಬಂಧ ಹಾಳಾಗುತ್ತಿದೆ ಎಂದು ಅನೇಕ ಚೀನಿಯರು ಟ್ವಿಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತ ಭಾರತದಲ್ಲೂ ಚೀನಿ ಸೇನಾಪಡೆಯ ಉದ್ಧಟತನಕ್ಕೆ ಟೀಕೆಗಳು ವ್ಯಕ್ತವಾಗಿವೆ. ಚೀನಿಯರು ಗಾಲ್ವಾನ್ ಕಣಿವೆಯಲ್ಲಿ ಭಾರತದ ಯೋಧರ ಮೇಲೆ ದಾಳಿ ನಡೆಸಲು ಬ್ಯಾಟ್ಗಳನ್ನು ತಂದರು. ಆದರೆ, ನಮ್ಮ ವೀರ ಯೋಧರು ಸಿಕ್ಸರ್ ಬಾರಿಸಿ ಚೀನಿಯರನ್ನು ಬಡಿದೋಡಿಸಿದರು ಎಂದು ಅನೇಕರು ವ್ಯಂಗ್ಯವಾಡಿದ್ದಾರೆ.
ನಮ್ಮವರು 20 ಜನ ಬಲಿಯಾದರು. ಆದರೆ, ಚೀನಾದವರು 5 ಪಟ್ಟು ಹತರಾದರು ಎಂದು ಟೀಕಿಸಿದ್ದಾರೆ. ನಮ್ಮ ಭಾರತ ಈವರೆಗೆ ಪಾಕಿಸ್ತಾನ ಸೇನೆಗೆ ಸರಿಯಾಗಿ ಬಿಸಿ ಮುಟ್ಟಿಸಿದೆ. ಇನ್ನು ಮುಂದೆ ಚೀನಾದ ಪಿಎಲ್ಎ ಯೋಧರಿಗೆ ತಕ್ಕ ಪಾಠ ಕಲಿಸುವ ಸರದಿ ಮುಂದುವರಿಯಲಿದೆ ಎಂದು ಭಾರತೀಯ ವೀರ ಯೋಧರ ಶೌರ್ಯವನ್ನು ಕೊಂಡಾಡಿದ್ದಾರೆ.