ಬೆಂಗಳೂರು: ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಾ ಹೈರಾಣಾಗಿದ್ದ ರಾಜ್ಯ ಸರಕಾರಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವದ ಯಶಸ್ಸು ಈಗ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಪಕ್ಷ ಹಾಗೂ ಹೈಕಮಾಂಡ್ ನ ವಿಮರ್ಶೆಯ ನಿಕಶಕ್ಕೆ ಒಳಗಾಗುವ ಸಾಧ್ಯತೆ ನಿಚ್ಚಳವಾಗಿದೆ.
ಬೊಮ್ಮಾಯಿ ಅವರ ಕಾರ್ಯಶೈಲಿ, ಕಡತ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಂಘಪರಿವಾರದ ಮುಖಂಡರು ಇತ್ತೀಚೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಸೃಷ್ಟಿಯಾದ ಸೈದ್ಧಾಂತಿಕ ಅಸಮಾಧಾನ ಬೊಮ್ಮಾಯಿ ಸರಕಾರವನ್ನು ಅಲ್ಲಾಡಿಸಿತ್ತು.
ಈ ಮಧ್ಯೆ ಸಿದ್ದರಾಮಯ್ಯ ಅಮೃತ ಮಹೋತ್ಸವದ ಯಶಸ್ಸು ಮಲಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಡಿದೆಬ್ಬಿಸಿದ್ದು ರಾಜಕೀಯವಾಗಿ ಬೊಮ್ಮಾಯಿ ಸರಕಾರಕ್ಕೆ ಬಹುದೊಡ್ಡ ಹಿನ್ನಡೆಯನ್ನು ಸೃಷ್ಟಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿರುವ ಸಂದರ್ಭದಲ್ಲೇ ಹುಟ್ಟಿರುವ ಈ ಬೆಳವಣಿಗೆ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.