ಬೆಂಗಳೂರು,ಜೂ.4- ರಾಜ್ಯಸಭೆ ಚುನಾವಣೆಯಲ್ಲಿ ಒಂದೊಂದು ಮತವು ಮೂರು ರಾಜಕೀಯ ಪಕ್ಷಗಳಿಗೆ ನಿರ್ಣಾಯಕವಾಗಿರುವುದರಿಂದ ಮೂವರು ಪಕ್ಷೇತರ ಶಾಸಕರಿಗೆ ಭಾರೀ ಡಿಮ್ಯಾಂಡ್ ಬಂದಿದೆ.
ವಿಧಾನಸಭೆಯ ಒಟ್ಟು 224 ಸದಸ್ಯರಲ್ಲಿ ಮೂವರು ಪಕ್ಷೇತರ ಶಾಸಕರಿದ್ದಾರೆ. ಎಚ್.ನಾಗೇಶ್(ಮುಳಬಾಗಿಲು), ಶರತ್ ಬಚ್ಚೇಗೌಡ(ಹೊಸಕೋಟೆ) ಹಾಗೂ ಎನ್.ಮಹೇಶ್(ಕೊಳ್ಳೆಗಾಲ) ಅವರಿಗೆ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಗಾಳ ಬೀಸಿದ್ದಾರೆ.
ಈಗಾಗಲೇ ಎನ್.ಮಹೇಶ್ ಅವರು ಬಿಜೆಪಿ ಜೊತೆ ಗುರುತಿಸಿಕೊಂಡು 2023ರ ವಿಧಾನಸಭೆ ಚುನಾವಣೆಯಲ್ಲಿ ಕೊಳ್ಳೆಗಾಲದಿಂದ ಅವರಿಗೆ ಟಿಕೆಟ್ ಖಾತರಿಯಾಗಿದೆ. ಅಲ್ಲದೆ ಸಚಿವ ಸಂಪುಟ ಪುನಾರಚನೆಯಾದರೆ ದಲಿತ ಕೋಟಾದಲ್ಲಿ ಅದೃಷ್ಟ ಖುಲಾಯಿಸಿದರೂ ಅಚ್ಚರಿ ಇಲ್ಲ. ಒಂದು ಬಾರಿ ಅಬಕಾರಿ ಸಚಿವರಾಗಿ ಇದೀಗ ಅಂಬೇಡ್ಕರ್ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಎಚ್.ನಾಗೇಶ್ ಬಿಜೆಪಿ ಜೊತೆ ಹೆಚ್ಚಾಗಿ ಗುರುತಿಸಿಕೊಳ್ಳದಿದ್ದರೂ ಸದ್ಯಕ್ಕೆ ಅವರು ಅಡ್ಡ ಮತದಾನ ಚಲಾಯಿಸುವ ಸಾಧ್ಯ ಸಾಧ್ಯತೆಗಳು ತೀರಾ ಕಡಿಮೆ.
ಏಕೆಂದರೆ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿದ್ದು ಬಿಜೆಪಿಗೆ ಸೇರ್ಪಡೆಯಾಗುವುದಾದರೆ ಬೆಂಗಳೂರಿನಲ್ಲಿರುವ ಮೀಸಲು ಕ್ಷೇತ್ರದಿಂದ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ರ್ಪಸಿ ಪರಾಭವಗೊಂಡಿದ್ದ ಹೊಸಕೋಟೆಯ ಶರತ್ ಬಚ್ಚೇಗೌಡ ಈಗಾಗಲೇ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಆದರೂ ಈ ಮೂವರು ಶಾಸಕರು ಪಕ್ಷೇತರರೆಂದೇ ಪರಿಗಣಿಸಲಾಗಿದೆ.