ತಿರುಪತಿ: ಕರ್ನೂಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಠಾಣೆಯಲ್ಲಿದ್ದ 15 ಲಕ್ಷ ರೂಪಾಯಿ ಹಣದ ಜತೆಗೆ ಪರಾರಿಯಾಗಿರುವ ಘಟನೆ ನಡೆದಿದ್ದು, ಕರ್ನೂಲ್ ಜಿಲ್ಲಾ ಪೊಲೀಸ್ ವಿಭಾಗ ತಲೆಮರೆಸಿಕೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ಪತ್ತೆಗೆ ಶುಕ್ರವಾರ ಬಲೆ ಬೀಸಿದ್ದಾರೆ.
ಮೂಲಗಳ ಪ್ರಕಾರ, ಸರ್ಕಲ್ ಇನ್ಸ್ಪೆಕ್ಟರ್ ಹೆಸರು ಕಂಬಗಿರಿ ರಾಮುಡು ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ನಗರದ ಹೊರವಲಯದ ಪಂಚಲಿಂಗಲ ಚೆಕ್ಪೋಸ್ಟ್ ಬಳಿ ತಮಿಳುನಾಡು ಮೂಲದ ಸತೀಶ್ ಬಾಲಕೃಷ್ಣನ್ ಎಂಬುವರಿಗೆ ಸೇರಿದ ವಾಹನವೊಂದರ ತಪಾಸಣೆ ಮಾಡುವಾಗ ವಶಕ್ಕೆ ಪಡೆಯಲಾದ ಒಟ್ಟು 75 ಲಕ್ಷ ರೂ. ಹಣದಲ್ಲಿ 15 ಲಕ್ಷ ರೂ. ಹಣವನ್ನು ತೆಗೆದುಕೊಂಡು ರಾಮುಡು ಪರಾರಿಯಾಗಿದ್ದಾರೆ.
ವಶಕ್ಕೆ ಪಡೆದ ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಸರ್ಕಲ್ ಇನ್ಸ್ಪೆಕ್ಟರ್ ರಾಮುಡು, ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ 15 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಸತೀಶ್ ಬಾಲಕೃಷ್ಣನ್ ಗುರುವಾರ ತಡರಾತ್ರಿ ಕರ್ನೂಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಸತೀಶ್ ಬಾಲಕೃಷ್ಣನ್ ಅವರು ತಮಿಳುನಾಡಿನ ತಿರ್ಪ್ಪುರ್ ಮೂಲದವರು. ಭಾನುವಾರ ಖಾಸಗಿ ಬಸ್ ಒಂದರಲ್ಲಿ ಹೈದರಾಬಾದ್ನಿಂದ ಮದುರೈಗೆ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ಪಂಚಲಿಂಗಲ ಚೆಕ್ಪೋಸ್ಟ್ ಬಳಿ ಬಸ್ ತಡೆದು ತಪಾಸಣೆ ಮಾಡುವಾಗ ಸತೀಶ್ ಬಳಿ 75 ಲಕ್ಷ ರೂ. ಭಾರೀ ಮೊತ್ತ ಇದ್ದಿದ್ದರಿಂದ ನಗದು ಸಮೇತ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆಂದು ಕರ್ನೂಲ್ ತಾಲೂಕು ಪೊಲೀಸರಿಗೆ ಒಪ್ಪಿಸಲಾಯಿತು.