ಬೆಳಗಾವಿ: ಮುರಗೋಡ ಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿಧ ಪೊಲೀಸರು, ಅವರಿಂದ 4.37 ಕೋಟಿ ನಗದು, 1.63ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶ ಪಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಬಸವರಾಜ ಹುಣಶಿಕಟ್ಟಿ (30), ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ಸಂತೋಷ ಕಂಬಾರ (31) ಹಾಗೂ ಜೀವಾಪೂರ ಗ್ರಾಮದ ಗಿರೀಶ್ ಬೆಳವಲ (26) ಬಂಧಿತರು. ಮುರಗೋಡ ಪೊಲೀಸರು ಬಂಧಿತ ಆರೋಪಿಗಳಿಂದ 4.37 ಕೋಟಿ ನಗದು ಹಣ, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ಪ್ರಕರಣ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುತಗೋಡ ಗ್ರಾಮದಲ್ಲಿ ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್ನಲ್ಲಿ 6 ಕೋಟಿ ನಗದು ಹಣ, ಚಿನ್ನಾಭರಣ ಕಳ್ಳತನ ಆಗಿತ್ತು. ಈ ಕುರಿತು ಮುರಗೋಡ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಕೃಷ್ಣಪ್ಪ ಯಲಿಗಾರ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದೇ ವಾರದಲ್ಲಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿ ಆಗಿದ್ದು, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಆ ಪೈಕಿ ಡಿಸಿಸಿ ಬ್ಯಾಂಕ್ನಲ್ಲಿ ಕ್ಲರ್ಕ್ ಕಮ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ ಹುಣಸಿಕಟ್ಟಿ ಎಂಬಾತನೇ ನಕಲಿ ಕೀ ಬಳಸಿ ಆತನ ಇಬ್ಬರು ಸ್ನೇಹಿತರ ಜೊತೆಗೂಡಿ 4.37ಕೋಟಿ ಹಣ, 1.63ಕೋಟಿ ಮೌಲ್ಯದ ಚಿನ್ನಾಭರಣ ಕದ್ದುಕೊಂಡು ಪರಾರಿ ಆಗಿದ್ದರು.