ಬೆಂಗಳೂರು: ಪೋಲಿಯೊ ಸೇರಿದಂತೆ ವಿವಿಧ ರೋಗಗಳ ತಡೆಗೆ ಇಂದ್ರಧನುಷ್ 4.0 ಅಭಿಯಾನದಡಿ ಆರೋಗ್ಯ ಇಲಾಖೆಯು ಮಾ.7ರಿಂದ ರಾಜ್ಯದ 11 ಜಿಲ್ಲೆಗಳಲ್ಲಿ ಮೂರು ಸುತ್ತಿನ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ.
ಈವರೆಗೂ ಲಸಿಕೆ ಪಡೆಯದ ಹಾಗೂ ಬಿಟ್ಟುಹೋದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಈ ಅಭಿಯಾನದಡಿ ಲಸಿಕೆ ನೀಡಲಾಗುತ್ತದೆ.
ಮಾ.7, ಏ.4 ಹಾಗೂ ಮೇ 9ರಂದು ನಿಗದಿತ ದಿನಾಂಕದ 7 ಕಾರ್ಯದಿನಗಳು ಈ ಅಭಿಯಾನ ನಡೆಯಲಿದೆ.
ಬೀದರ್, ಗದಗ, ದಕ್ಷಿಣ ಕನ್ನಡ, ಕಲಬುರಗಿ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ, ದಾವಣಗೆರೆ, ಬಿಬಿಎಂಪಿ, ಬಾಗಲಕೋಟೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲನೇ ಸುತ್ತಿನಲ್ಲಿ 30,234 ಮಕ್ಕಳು ಹಾಗೂ 7,521 ಗರ್ಭಿಣಿಯರನ್ನು ತಲುಪುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬಾಲ ಕ್ಷಯ, ಪೋಲಿಯೊ, ಹೆಪಟೈಟಿಸ್ ಬಿ, ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು, ಇನ್ಫ್ಲೂಯೆಂಜಾ (ಹಿಬ್), ರೋಟಾ ವೈರಸ್, ಅತಿಸಾರ, ಇರುಳು ಕುರುಡು, ದಡಾರ, ರುಬೆಲ್ಲ, ಗಂಟಲುಮಾರಿ ಮತ್ತು ಮಿದುಳು ಜ್ವರ ತಡೆಗೆ ಲಸಿಕೆ ಹಾಗೂ ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ.
ಅಭಿವೃದ್ಧಿ ಹೊಂದದ ಪ್ರದೇಶಗಳು, ಸಾರ್ವತ್ರಿಕ ಲಸಿಕಾ ಅಭಿಯಾನ ನಡೆಯದ ಹಳ್ಳಿಗಳು, ವಲಸಿಗರು ಇರುವ ನಗರ ಪ್ರದೇಶ, ಅಲೆಮಾರಿಗಳು ವಾಸಿಸುವ ಪ್ರದೇಶಗಳು, ಇಟ್ಟಿಗೆ ಸುಡುವ ಜಾಗಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಮೀನುಗಾರರು ವಾಸಿಸುವ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು, ಸಾಂಕ್ರಾಮಿಕ ರೋಗಗಳು ವರದಿಯಾದ ಪ್ರದೇಶ, ಲಸಿಕೆ ನಿರಾಕರಿಸಲ್ಪಟ್ಟ ಪ್ರದೇಶಗಳಲ್ಲಿ ಈ ಅಭಿಯಾನ ನಡೆಯಲಿದೆ.
ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಲಸಿಕೆ ಹಾಕಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.