ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ರಾಜಾಹುಲಿಯಂತೆ, ಇಂದಿರಾ ಕ್ಯಾಂಟಿನ್ ಮುಚ್ಚಿದಕ್ಕೆ ಅವರು ರಾಜಾಹುಲಿಯಾ? ಅತ್ಯುತ್ತಮ ಶಾಸಕನಂತೆ, ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಿದ್ದರು. ಲೂಟಿ ಹೊಡೆಯುವುದನ್ನು ಬಿಟ್ಟರೆ ಬೇರೆ ಏನು ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸಂಜಯನಗರದ ಕುವೆಂಪು ಆಟದ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಏಳು ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ, ಕುಮಾರಸ್ವಾಮಿ ಅಕ್ಕಿ ಕೊಟ್ಟಿದ್ದರೆ ಹೇಳಿ? ಯಡಿಯೂರಪ್ಪ ಕೊಟ್ಟಿದ್ದರೇ? ಈಗ ಬೊಮ್ಮಾಯಿ ಕೊಡುತ್ತಿದ್ದಾರಾ? ಈಗ ಕಡಿಮೆ ಅಕ್ಕಿ ಕೊಡುತ್ತಿದ್ದಾರೆ. ಇವರೇನು ಇವರಪ್ಪನ ಮನೆಯಿಂದ ಕೊಡುತ್ತಾರಾ. ಬಡವರಿಗೆ ಅಕ್ಕಿ ಕೊಡಲು ಯಾಕೆ ಹೊಟ್ಟೆ ಉರಿ ? ನಾನೇನು ನಮ್ಮಪ್ಪನ ಮನೆಯಿಂದ ಕೊಟ್ಟೆನಾ ಎಂದು ವಾಗ್ದಾಳಿ ನಡೆಸಿದರು.
ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಏಳು ಕೆಜಿಯಲ್ಲ ಹತ್ತು ಕೆಜಿ ಅಕ್ಕಿಯನ್ನ ಉಚಿತವಾಗಿ ಕೊಡುತ್ತೇವೆ. ಮತ್ತೆ ಇಂದಿರಾ ಕ್ಯಾಂಟಿನ್ ಆರಂಭಿಸುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ಇವತ್ತು ಬೆಂಗಳೂರಿನಲ್ಲಿ ಅಭಿವೃದ್ಧಿ ಆಗುತ್ತಿರುವುದಕ್ಕೆ ನಾನು ಕೊಟ್ಟಿರುವ ಅನುದಾನ ಕಾರಣ. ನಾನು ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಟ್ಟಿದ್ದೇನೆ. ಹಾಗಾಗಿಯೇ ಇಂದು ಹೆಚ್ಚು ಕೆಲಸಗಳಾಗುತ್ತಿವೆ. ಬಿಜೆಪಿಯವರು ನಯಾ ಪೈಸೆಯನ್ನೂ ಬೆಂಗಳೂರಿಗೆ ಕೊಟ್ಟಿಲ್ಲ. ಕೊಡದಿದ್ದರೂ ಕೊಟ್ಟಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ. ಇವರದ್ದು ಸುಳ್ಳು ತಯಾರಿಸೋ ಕಾರ್ಖಾನೆಯಾಗಿದೆ. ಅವರು ಏನೇ ಹೇಳಿದರೂ ಸುಳ್ಳೇ ಆಗಿರಲಿದೆ ಎಂದ ಅವರು, ಭಾರತದ ಇತಿಹಾಸದಲ್ಲಿ ಇಷ್ಟೊಂದು ಸುಳ್ಳು ಹೇಳಿದ ಪ್ರಧಾನಮಂತ್ರಿ ಮೋದಿ ಮಾತ್ರ. ಮಾತೆತ್ತಿದರೆ ಅಚ್ಛೇ ದಿನ ಎಂದು ಹೇಳುತ್ತಾರೆ. ಆದರೆ, ಈಗ ಬದುಕಲು ಸಾಧ್ಯವೇ ಆಗುತ್ತಿಲ್ಲ ಅಂತಹ ಪರಿಸ್ಥಿತಿ ಬಂದಿದೆ. ಯಾವುದನ್ನೂ ಕೊಂಡು ಕೊಳ್ಳಲು ಆಗದಂತಹ ಪರಿಸ್ಥಿತಿ ಇದೆ ಎಂದು ಹೇಳಿದರು.
ಬಿಜೆಪಿಯವರು ಹಿಂದೂಗಳ ಪರವೆಂದು ಹೇಳುತ್ತಾರೆ. ಆದರೆ ಅವರೇ ದೇವಾಲಯವನ್ನ ಒಡೆದು ಹಾಕುತ್ತಾರೆ. ನಂಜನಗೂಡಿನಲ್ಲಿ ದೇವಸ್ಥಾನ ಒಡೆದು ಹಾಕಿದವರು ಯಾರು ? ಪ್ರತಿಭಟನೆ ಮಾಡಿದವರು ಯಾರು? ಮಗು ತೂಗುವುದು ಅವರೇ ಚಿವುಟೋದು ಅವರೇ ಎಂದು ಕಿಡಿಕಾರಿದರು.
ಜೆಡಿಎಸ್ ನವರು ಅಧಿಕಾರಕ್ಕೆ ಬರುವ ಗಿರಾಕಿಗಳಲ್ಲ. ಅವರು ಬಂದರೆ ಅವರ ಜೊತೆ, ಇವರು ಬಂದರೆ ಇವರ ಜೊತೆ. 30 ಸೀಟ್ ನಲ್ಲೇ ಅವರಿವರ ಜೊತೆ ಹೋಗುವುದಷ್ಟೇ ಇವರ ಕೆಲಸ. ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ ಸಿಕ್ಕ ಸಿಕ್ಕವರ ಜೊತೆ ಹೋಗುವ ಗಿರಾಕಿಗಳು ಜೆಡಿಎಸ್ ನವರು ಎಂದು ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Laxmi News 24×7