Breaking News

ಮೈಸೂರು; ಉಪ ಚುನಾವಣೆ ಬಿ-ಫಾರಂ ನೀಡಿದ ಸಿದ್ದರಾಮಯ್ಯ

Spread the love

ಮೈಸೂರು, ಆಗಸ್ಟ್ 20; ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ. ಸೆಪ್ಟೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.

ಉಪ ಚುನಾವಣೆಗೆ ರಜಿನಿ ಅಣ್ಣಯ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ರಜನಿ ಅಣ್ಣಯ್ಯಗೆ ಬಿ-ಫಾರಂ ವಿತರಣೆ ಮಾಡಿ, ಗೆಲುವು ಸಿಗಲಿ ಎಂದು ಶುಭ ಹಾರೈಸಿದರು.

 

ರಜನಿ ಅಣ್ಣಯ್ಯ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬಿಜೆಪಿ ಇಂದು ಸಂಜೆ ಅಭ್ಯರ್ಥಿಯನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಆಗಸ್ಟ್ 23 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.

 

ಮೇಯರ್ ಪ್ರತಿನಿಧಿಸುತ್ತಿದ್ದರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 36ನೇ ವಾರ್ಡ್‌ನಲ್ಲಿ ಜೆಡಿಎಸ್‌ನ ರುಕ್ಷ್ಮಿಣಿ ಮಾದೇಗೌಡ ಜಯಗಳಿಸಿದ್ದರು. ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿಯೂ ರುಕ್ಷ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದರು.

ಆದರೆ 2018ರಲ್ಲಿ ನಡೆದ ಚುನಾವಣೆ ವೇಳೆ ಆದಾಯ ಮುಚ್ಚಿಟ್ಟ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ರುಕ್ಷ್ಮಿಣಿ ಮಾದೇಗೌಡ ಸದಸ್ಯತ್ವವನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿತ್ತು. ಆದ್ದರಿಂದ ಈಗ ವಾರ್ಡ್‌ಗೆ ಉಪ ಚುನಾವಣೆ ನಡೆಯುತ್ತಿದೆ.

36ನೇ ವಾರ್ಡ್‌ನಲ್ಲಿ ರುಕ್ಷ್ಮಿಣಿ ಮಾದೇಗೌಡ ವಿರುದ್ಧ ಸೋಲು ಕಂಡಿದ್ದ ರಜನಿ ಅಣ್ಣಯ್ಯ ಆದಾಯ ಮುಚ್ಚಿಟ್ಟ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸದಸ್ಯತ್ವ ಅಸಿಂಧುಗೊಳಿಸಿದ ಹಿನ್ನಲೆಯಲ್ಲಿ ಈಗ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್‌ನಿಂದ ರಜನಿ ಅಣ್ಣಯ್ಯ ಉಪ ಚುನಾವಣೆ ಟಿಕೆಟ್ ಪಡೆದಿದ್ದಾರೆ.

ಬಿಜೆಪಿ ಶಾಸಕ ಎಲ್. ನಾಗೇಂದ್ರರನ್ನು ಉಪ ಚುನಾವಣೆ ಉಸ್ತುವಾರಿಯಾಗಿ ನೇಮಕ ಮಾಡಿದೆ. ಕಳೆದ ಬಾರಿ 400 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ಈ ಬಾರಿ ವಾರ್ಡ್‌ನಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಇದೆ.

ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ. ಎಸ್. ಶ್ರೀವತ್ಸ ಉಪ ಚುನಾವಣೆ ಬಗ್ಗೆ ಮಾತನಾಡಿದ್ದಾರೆ, “ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ಈ ಬಾರಿ ಬಿಜೆಪಿಗೆ ಪೂರಕವಾದ ವಾತಾವರಣವಿದೆ. ಶುಕ್ರವಾರ ಸಂಜೆ ಅಭ್ಯರ್ಥಿ ಅಂತಿಮಗೊಳಿಸುತ್ತೇವೆ” ಎಂದು ಹೇಳಿದ್ದಾರೆ.

ಹೊಸ ಮೇಯರ್ ಆಯ್ಕೆ ರುಕ್ಷ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನಲೆಯಲ್ಲಿ ಮೇಯರ್ ಸ್ಥಾನವೂ ಅನರ್ಹಗೊಂಡಿದೆ. ಈಗ ಹೊಸ ಮೇಯರ್ ಆಯ್ಕೆಗೆ ದಿನಾಂಕ ನಿಗದಿಯಾಗಿದೆ. ಬಿಜೆಪಿ ಮೇಯರ್ ಸ್ಥಾನದ ಮೇಲೆಯೂ ಕಣ್ಣಿಟ್ಟಿದೆ. ಪ್ರಸ್ತುತ 23 ಸದಸ್ಯ ಬಲವನ್ನು ಪಾಲಿಕೆಯಲ್ಲಿ ಬಿಜೆಪಿ ಹೊಂದಿದೆ.

ಆ. 25ರಂದು ಚುನಾವಣೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆಗೆ ಆಗಸ್ಟ್ 25 ಬುಧವಾರ ಮಧ್ಯಾಹ್ನ 12 ಗಂಟೆಗೆ ಮಹಾನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

ಕಳೆದ ಬಾರಿ ಮೇಯರ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ ಉಪ ಚುನಾವಣೆಯಲ್ಲಿ ಮೈತ್ರಿ ಪ್ರಭಾವ ಬೀರುವುದಿಲ್ಲ. ವಾರ್ಡ್‌ನಲ್ಲಿ ಜೆಡಿಎಸ್ ನಮಗೆ ಎದುರಾಳಿ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಮೈಸೂರು ನಗರ ಜೆಡಿಎಸ್ ಅಧ್ಯಕ್ಷ ಚೆಲುವೇಗೌಡ ಸೇರಿದಂತೆ ಹಲವು ಮುಖಂಡರು ಸಭೆಯನ್ನು ನಡೆಸಿದ್ದಾರೆ. ರುಕ್ಷ್ಮಿಣಿ ಮಾದೇಗೌಡ ಸ್ಪರ್ಧಿಸುವುದು ಅನುಮಾನವಾಗಿದೆ. ಮಾದೇಗೌಡ ತಂಗಿ ಅಥವ ನಾದಿನಿಯನ್ನು ಕಣಕ್ಕಿಳಿಸುವ ಚರ್ಚೆಗಳು ನಡೆದಿವೆ.

ಮೂರು ದಿನಗಳ ಹಿಂದೆ ರಜನಿ ಅಣ್ಣಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಭೇಟಿ ಮಾಡಿದ್ದರು. ಇದರಿಂದಾಗಿ ಉಪ ಚುನಾವಣೆಯಲ್ಲಿ ಪಕ್ಷದ ನಿಲುವು ಸಹ ಕುತೂಹಲಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ