ಬೆಳಗಾವಿ: ಕೇಂದ್ರ ಬಸ್ ನಿಲ್ದಾಣದ ಬಳಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಂಡರ್ಪಾಸ್ ಬಿಳಿ ಆನೆಯಂತಾಗಿದೆಯೇ? ಸಂಚಾರಿ ನಿಯಮ ಗಾಳಿಗೆ ತೂರಿ ಜೀವದ ಹಂಗು ತೊರೆದು ರಸ್ತೆ ದಾಟುತ್ತಿರುವ ಸಾರ್ವಜನಿಕರಿಗೆ ಸಮಾಜ ಸೇವಕಿ ಕಸ್ತೂರಿ ಭಾಂವಿ ಇಂದು ಬಿಸಿ ಮುಟ್ಟಿಸಿದ್ದಾರೆ.
ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸಿಬಿಟಿವರೆಗಿನ ರಸ್ತೆಯಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಅಂಡರ್ಪಾಸ್ ನಿರ್ಮಿಸಲಾಗಿದೆ. ಆದರೆ, ಈ ವ್ಯವಸ್ಥೆಯನ್ನು ಬಳಸುವ ಬದಲು ಸಾರ್ವಜನಿಕರು ಅಪಾಯಕಾರಿ ರೀತಿಯಲ್ಲಿ ರಸ್ತೆ ವಿಭಾಜಕಗಳನ್ನು (ಡಿವೈಡರ್) ಜಿಗಿದು ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಣ್ಣ ಮಕ್ಕಳು ಮತ್ತು ವಯೋವೃದ್ಧರು ಸಹ ವಾಹನಗಳ ದಟ್ಟಣೆಯ ನಡುವೆಯೇ ವಿಭಾಜಕ ಜಿಗಿಯುತ್ತಿದ್ದು, ಇದು ದೊಡ್ಡ ಮಟ್ಟದ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಜನರ ಅಸಡ್ಡೆಯೋ, ಒಟ್ಟಿನಲ್ಲಿ ಉದ್ದೇಶಿತ ಯೋಜನೆಯು ಸಾರ್ವಜನಿಕರಿಗೆ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಈ ಅಪಾಯಕಾರಿ ಬೆಳವಣಿಗೆಯನ್ನು ಗಮನಿಸಿದ ಸಮಾಜ ಸೇವಕಿ ಕಸ್ತೂರಿ ಭಾಂವಿ ಅವರು ಇಂದು ರಸ್ತೆಗಿಳಿದು ಜನರಿಗೆ ಜಾಗೃತಿ ಮೂಡಿಸಿದರು.
ರಸ್ತೆ ವಿಭಾಜಕ ಜಿಗಿಯದಂತೆ ಜನರನ್ನು ತಡೆದ ಅವರು, ಕಡ್ಡಾಯವಾಗಿ ಅಂಡರ್ಪಾಸ್ ಬಳಸುವಂತೆ ಆಗ್ರಹಿಸಿದರು. “ಒಂದು ವೇಳೆ ವಿಭಾಜಕ ಜಿಗಿಯುವಾಗ ವಾಹನ ಸವಾರರು ಡಿಕ್ಕಿ ಹೊಡೆದು ಅಪಘಾತವಾದರೆ ಅದಕ್ಕೆ ಹೊಣೆ ಯಾರು? ಪ್ರಾಣ ಹೋದ ಮೇಲೆ ವಿಷಾದಿಸಿ ಪ್ರಯೋಜನವಿಲ್ಲ” ಎಂದು ಕಸ್ತೂರಿ ಭಾಂವಿ ಅವರು ಸಾರ್ವಜನಿಕರನ್ನು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಂಡರ್ಪಾಸ್ ಬಳಕೆಗೆ ಇರುವ ಅಡೆತಡೆಗಳನ್ನು ನಿವಾರಿಸಿ, ಜನರು ಅದನ್ನು ಬಳಸುವಂತೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
Laxmi News 24×7