ಬೆಂಗಳೂರು: ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಸಹಿ ನಕಲು ಮಾಡಿ ಖೊಟ್ಟಿ ಲೆಟರ್ಹೆಡ್ ಬಳಸುತ್ತಿದ್ದ ನಕಲಿ ಐಪಿಎಸ್, ಐಎಎಸ್ ಅಧಿಕಾರಿ ಎಚ್.ಎನ್. ಸುಜಯೇಂದ್ರ (45) ಎಂಬಾತನ ವಿರುದ್ಧ ವಿಜಯನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ನೀಡಿದ ದೂರಿನನ್ವಯ ಸುಜಯೇಂದ್ರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ರಾಜ್ಯಪಾಲರ ಹೆಸರಿನ ಲೆಟರ್ಹೆಡ್ ಬಳಸಿರುವ ಸುಜಯೇಂದ್ರ, ರಾಜ್ಯಪಾಲರ ಸಹಿ ನಕಲು ಮಾಡಿ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಆದೇಶ ಹೊರಡಿಸಿದ್ದಾನೆ. ಈ ನಿಟ್ಟಿನಲ್ಲಿ ಸುಜಯೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಹೆಸರಿನಲ್ಲಿ ಜಮ್ಮುವಿನ ವೈದ್ಯರೊಬ್ಬರಿಗೆ ಜಮೀನು ಕೊಡಿಸುವುದಾಗಿ 2.7 ಕೋಟಿ ರೂ. ಪಡೆದು ವಂಚಿಸಿದ್ದ ಪ್ರಕರಣದಲ್ಲಿ 2025ರ ನವೆಂಬರ್ನಲ್ಲಿಆರ್ಪಿಸಿ ಲೇಔಟ್ನ ಎಚ್.ಎನ್. ಸುಜಯೇಂದ್ರನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ ಸುಜಯೇಂದ್ರ ಬಳಿ ಗೃಹ ಇಲಾಖೆ ಸೀಲುಗಳು, ರಾಜ್ಯ ಸರಕಾರದ ಸೀಲು ಸೇರಿದಂತೆ ನಕಲಿ ದಾಖಲೆಗಳು ಪತ್ತೆಯಾಗಿದ್ದವು.ಐಎಎಸ್ ಹಾಗೂ ಐಪಿಎಸ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಸುಜಯೇಂದ್ರ ವಂಚನೆ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಕೇಂದ್ರ ಗೃಹ ಇಲಾಖೆ ಎಡಿಜಿಪಿ ಎಂದು ಹೇಳಿಕೊಂಡು ಪೊಲೀಸರಿಂದ ಪ್ರೋಟೊಕಾಲ್ ಸೇವೆ ಪಡೆಯುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಜಯೇಂದ್ರ ವಿರುದ್ಧ 2009ರಲ್ಲಿ ಶೇಷಾದ್ರಿಪುರಂ ಠಾಣೆಯಲ್ಲಿವಂಚನೆ ಪ್ರಕರಣ ದಾಖಲಾಗಿತ್ತು. ಅಂದಿನ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಅವರ ಅಳಿಯ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಜತೆಗೆ, ಎಸಿಪಿಯೊಬ್ಬರಿಗೆ ವಂಚಿಸಲು ಯತ್ನಿಸಿ ಜೈಲು ಸೇರಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
Laxmi News 24×7