ನವದೆಹಲಿ: ದೇಶದ ಸಾಲದ ಬಗ್ಗೆ ಕಾಂಗ್ರೆಸ್ ಸುಳ್ಳು ಕಾಳಜಿ ತೋರಿಸುತ್ತಿದೆ ಎಂದು ಟೀಕಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಒಂ ದೆಡೆ ಸಾಲ ಏರುತ್ತಿದೆ ಎಂದು ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್, ಮತ್ತೊಂದೆಡೆ ರಾಜ್ಯಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ ಮತ್ತು ಹೆಚ್ಚು ಸಾಲ ಮಾಡಿ ಎಂದು ಒತ್ತಾಯಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ರಾಜ್ಯಸಭೆಯಲ್ಲಿ 2026-27ರ ಕೇಂದ್ರ ಬಜೆಟ್ ಮೇಲಿನ ಸುದೀರ್ಘ ಚರ್ಚೆಗೆ ಉತ್ತರಿಸಿದ ಸೀತಾರಾಮನ್, ಸರ್ಕಾರದ ಹಣಕಾಸು ನಿರ್ವಹಣೆಯ ಬಗ್ಗೆ ಸ್ಪಷ್ಟನೆ ನೀಡಿದರು. ನಮ್ಮ ಸರ್ಕಾರ ಕೇವಲ ಹಣದ ಹಂಚಿಕೆ ಬಗ್ಗೆ ಯೋಚಿಸುವುದಿಲ್ಲ, ಬದಲಾಗಿ ಅದರ ಫಲಿತಾಂಶ ಏನಾಗಿದೆ ಎಂಬುದರ ಮೇಲೆ ಗಮನ ಹರಿಸುತ್ತದೆ. ನಾವು ಹಣ ನೀಡಲು ಸಿದ್ಧರಿದ್ದೇವೆ. ಆದರೆ ನಮಗೆ ಫಲಿತಾಂಶ ಬೇಕು. ಕಾಂಗ್ರೆಸ್ಗೆ ಕೇವಲ ಖರ್ಚು ಮಾಡುವುದು ಗೊತ್ತು, ನಮಗೆ ಅಭಿವೃದ್ಧಿ ಮುಖ್ಯ ಎಂದು ಹೇಳಿದ್ದಾರೆ.
ತಮಿಳುನಾಡಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಡಿಎಂಕೆ ನಾಯಕ ಪಿ. ವಿಲ್ಸನ್ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ, ರಾಜ್ಯಗಳ ಸಾಲದ ಹೊರೆಯ ಬಗ್ಗೆ ಗಂಭೀರ ಅಂಕಿಅಂಶಗಳನ್ನು ನೀಡಿದರು.
ಐತಿಹಾಸಿಕ ಸಾಲ: ಕಳೆದ 73 ವರ್ಷಗಳಲ್ಲಿ ತಮಿಳುನಾಡಿನ ವಿವಿಧ ಸರ್ಕಾರಗಳು ಒಟ್ಟು 5 ಲಕ್ಷ ಕೋಟಿ ರೂ. ಸಾಲ ಮಾಡಿದ್ದವು.
ಡಿಎಂಕೆ ಆಡಳಿತದಲ್ಲಿ ಏರಿಕೆ: ಆದರೆ 2021ರಿಂದ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರವು ಕೇವಲ ನಾಲ್ಕು ವರ್ಷಗಳಲ್ಲಿ ಈ ಮೊತ್ತಕ್ಕೆ ಹೆಚ್ಚುವರಿಯಾಗಿ 4.56 ಲಕ್ಷ ಕೋಟಿ ರೂ. ಸಾಲವನ್ನು ಸೇರಿಸಿದೆ ಎಂದು ಅವರು ಮಾಜಿ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ವಿತ್ತ ಸಚಿವೆ ಕಿಡಿಕಾರಿದ್ದಾರೆ.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದು ಕೇಂದ್ರ ಬಜೆಟ್ ಚರ್ಚೆಯೇ ಅಥವಾ ತಮಿಳುನಾಡು ಬಜೆಟ್ ಚರ್ಚೆಯೇ? ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಇಲ್ಲಿ ಎಳೆಯುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಈ ವೇಳೆ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕೆಲಕಾಲ ಗದ್ದಲ ಉಂಟಾಯಿತು.
Laxmi News 24×7