ಬೆಳಗಾವಿ: ಬೆಳಗಾವಿಯಲ್ಲಿ ಉದ್ಯಮಗಳು ಬೆಳೆಯಬೇಕು. ಉದ್ಯಮಿಗಳು ಬೆಳವಣಿಗೆ ಹೊಂದಬೇಕಾದರೆ ಇಲ್ಲಿರುವ ಸಮಸ್ಯೆಗಳು ನಿವಾರಣೆಯಾಗಬೇಕು. ಅದಕ್ಕೆ ಉದ್ಯಮಿಗಳು ಒಂದಾಗಿ ಗಟ್ಟಿ ಧ್ವನಿ ಎತ್ತಬೇಕು ಎನ್ನುವ ಒಕ್ಕೊರಲ ಅಭಿಪ್ರಾಯ, ಮಂಗಳವಾರ ಆರಂಭವಾದ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನದ ಉದ್ಘಾಟನೆ ಸಮಾರಂಭದ ವೇಳೆ ವ್ಯಕ್ತವಾಯಿತು.
ಬೆಳಗಾವಿ ವಾಣಿಜ್ಯೋದ್ಯಮ ಸಂಘದ ವತಿಯಿಂದ ಫೌಂಡ್ರಿಕ್ಲಸ್ಟರ್ ಆವರಣದಲ್ಲಿ 3 ದಿನಗಳ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನ ಬೆಲೆಕ್ಸ್ – 2026 ಆಯೋಜಿಸಲಾಗಿದ್ದು, ಉದ್ಘಾಟನೆ ಸಮಾರಂಭ ಇಲ್ಲಿಯ ಉದ್ಯಮಗಳ ಬೆಳವಣಿಗೆಗೆ ಹಿನ್ನಡೆಯಾಗಿರುವ ಅಂಶಗಳ ಕುರಿತು ಗಮನ ಸೆಳೆಯುವಂತೆ ಮಾಡಿತು.
ಆರಂಭದಲ್ಲಿ ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ಬೆಳೆಯುತ್ತಿದೆ. ಆದರೆ ಸರಕಾರದ ಅಸಹಕಾರದಿಂದ ಕೈಗಾರಿಕೆಗಳು ಬೆಳೆಯುತ್ತಿಲ್ಲ. ಬಿಯಾಂಡ್ ಬೆಂಗಳೂರು ಹುಬ್ಬಳ್ಳಿಯವರೆಗೆ ನಿಲ್ಲುತ್ತಿದೆ. ಉದ್ಯಮಿಗಳು ಶಕ್ತಿ ತೋರಿಸುವವರೆಗೆ, ನೀವು ಒಟ್ಟಾಗುವವರೆಗೆ ಯಾವುದೇ ಸರಕಾರವಿರಲಿ ಕಣ್ಣೆತ್ತಿ ನೋಡುವುದಿಲ್ಲ ಎಂದು ಹೇಳಿದರು.
ಬೆಳಗಾವಿಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತು ಕೈಗಾರಿಕೆಗಳಿಗೆ ಪೂರಕವಾಗಿ ಮೂಸಭೂತ ಸೌಲಭ್ಯಗಳ ಸೃಷ್ಟಿಗೆ ತಾವು ಹೊಂದಿರುವ ಕನಸುಗಳನ್ನು ಬಿಚ್ಚಿಟ್ಟ ಅವರು, ಇಎಸ್ಐ ಆಸ್ಪತ್ರೆ ಕಾರ್ಮಿಕರು ಹೆಚ್ಚಾಗಿರುವ ದಕ್ಷಿಣದಲ್ಲಿ ಆಗಬೇಕು. ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಹೊರತುಪಡಿಸಿ ಎಲ್ಲವೂ ಉತ್ತರ ಭಾಗದಲ್ಲಿದೆ. ಬೆಳಗಾವಿಯಲ್ಲಿ ದೊಡ್ಡ ದೊಡ್ಡ ಉದ್ಯಮಗಳು ಬಂದು ಇಲ್ಲಿನ ಯುವಕರು ಇಲ್ಲಿಯೇ ತಂದೆ ತಾಯಿಗಳ ಜೊತೆ ಇದ್ದು ಉದ್ಯೋಗ ಮಾಡಬೇಕೆನ್ನುವ ಕನಸಿನೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾನು ಸದಾ ನಿಮ್ಮ ಜೊತೆ ಇರುತ್ತೇನೆ. ಉದ್ಯಮಬಾಗದಿಂದಾಗಿ ಬೆಳಗಾವಿಗೆ ಶಕ್ತಿ ಬಂದಿದೆ. ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಪ್ರಯತ್ನ ಆರಂಭವಾಗಿದೆ. ಎಲ್ಲದಕ್ಕೂ ಎಲ್ಲರ ಸಹಕಾರ ಅಗತ್ಯ. ನೀವೆಲ್ಲ ಒಂದಾದರೆ ಉದ್ಮಗಳನ್ನು, ಉದ್ಯಮಿಗಳನ್ನು ಬೆಳೆಸಬಹುದು ಎಂದು ಅಭಯಟ ಪಾಟೀಲ ಹೇಳಿದರು.
ಖ್ಯಾತ ಉದ್ಯಮಿ, ಅಶೋಕ ಐರನ್ ಚೇರಮನ್ ಜಯಂತ ಹುಂಬರವಾಡಿ ಮಾತನಾಡಿ, ಹಲವು ವರ್ಷಗಳ ನಂತರ ಇಂತಹ ಪ್ರದರ್ಶನ ನಡೆಯುತ್ತಿದೆ. ಇದು ಮುಂದುವರಿಯಬೇಕು. ಬಿಯಾಂಡ್ ಬೆಂಗಳೂರು ಯೋಜನೆಯಡಿ ಸರಕಾರ ಹುಬ್ಬಳ್ಳಿ- ಧಾರವಾಡ -ಬೆಳಗಾವಿ ಕ್ಲಸ್ಟರ್ ಆಗಿ ಬೆಳೆಸಲು ಯೋಜನೆ ಹೊದಿದೆ. ಆದರೆ ಇಲ್ಲಿನ ಉದ್ಯಮಿಗಳು ದೊಡ್ಡ ದ್ವನಿ ಎತ್ತುತ್ತಿಲ್ಲ ಎಂದರು.
ಬಹುರಾಷ್ಟ್ರೀಯ ಕಂಪನಿಗಳಿಗೆ ಆದ್ಯತೆ ಸಿಗುತ್ತಿದೆ, ಭಾರತೀಯ ಸಂಸ್ಥೆಗಳಿಗೆ ಗೌರವ ಇಲ್ಲ. ಸರಕಾರ ಮತ್ತು ಅಧಿಕಾರಿಗಳ ಅಸಹಕಾರ ನೀತಿಯಿಂದಾಗಿ ಇಲ್ಲಿನ ಉದ್ಯಮಿಗಳು ದ್ವನಿ ಕಳೆದುಕೊಂಡಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಯಾವಾಗ ನೋಡಿದರೂ ಸರ್ವರ್ ಡೌನ್ ಇರುತ್ತದೆ. ಸರಿಯಾದ ಜಾಗ ಸಿಗುತ್ತಿಲ್ಲ, ಸೌಲಭ್ಯಗಳು ಸಿಗುತ್ತಿಲ್ಲ, ಸಹಕಾರ ಸಿಗುತ್ತಿಲ್ಲ. ಇಂತಹ ಸಮಸ್ಯೆಗಳ ನಡುವೆ ಉದ್ಯಮ ಬೆಳೆಯಲು ಸಾಧ್ಯವಿಲ್ಲ. ಧೈರ್ಯದಿಂದ ಮಾತನಾಡುವವರೆಗೆ ಯಾರೂ ನೋಡುವುದಿಲ್ಲ. ನಾವು ಉದ್ಯೋಗ ಸೃಷ್ಟಿಸಿರುವಾಗ, ತೆರಿಗೆ ತುಂಬುವಾಗ ಯಾರಿಗೂ ಹೆದರುವ ಅಗತ್ಯವಿಲ್ಲ, ಎಲ್ಲರೂ ಒಂದಾಗಿ ಧ್ವನಿ ಎತ್ತಬೇಕು. ಉದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಎಂದು ಹುಂಬರವಾಡಿ ಹೇಳಿದರು.
ಬಿಸಿಸಿಐ (BCCI) ಈಗ ಕೈಗಾರಿಕೆಗಳನ್ನು ಪ್ರೇರೇಪಿಸುವುದರಿಂದ ಮುಂದೆ ಹೋಗಿ ಅವುಗಳನ್ನು ಪ್ರದರ್ಶಿಸುವ ಹಂತಕ್ಕೆ ಬಂದಿದೆ. ಬೆಳಗಾವಿ ನಗರ ಆಧಾರಿತ ದೃಷ್ಟಿಕೋನದಿಂದ ಕ್ಲಸ್ಟರ್ ಆಧಾರಿತ ಕೈಗಾರಿಕಾ ದೃಷ್ಟಿಗೆ ಹೋಗಬೇಕು. ಇವಿ (EV), ಏರೋಸ್ಪೇಸ್, ಗ್ಲಾಸ್, ಎಫ್ಎಂಸಿಜಿ ಕ್ಷೇತ್ರಗಳಿಗೆ ಒತ್ತು ನೀಡಬೇಕು ಎಂದರು.
ಮಹಾರಾಷ್ಟ್ರ ಜೈನ್ ಅಲ್ಪಸಂಖ್ಯಾತರ ಹಣಕಾಸು ಅಭಿವೃದ್ಧಿ ನಿಗಮದ ಚೇರಮನ್ ಲಲಿತ್ ಗಾಂಧಿ ಮಾತನಾಡಿ, ಇಂತಹ ಪ್ರದರ್ಶನ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಲಿದೆ. ಉದ್ಯಮಿಗಳು ಉದ್ಯೋಗ ಸೃಷ್ಟಿಸುತ್ತಾರೆ, ತೆರಿಗೆ ಕಟ್ಟುತ್ತಾರೆ. ಆದರೆ ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಸಹಕಾರ ಸಿಗುವುದಿಲ್ಲ. ಸಂಘಟಿತರಾಗಿ ಸರಕಾರದಿಂದ ಸಹಕಾರ ಪಡೆಯಬೇಕು ಎಂದರು.
ಮಹಾರಾಷ್ಟ್ರ ದಲ್ಲಿ 26 ಹೊಸ ಇಂಡಸ್ಟ್ರಿಯಲ್ ಎಸ್ಟೇಟ್ ಆರಂಭಿಸಲಾಗುತ್ತಿದೆ. ಅಲ್ಲಿನ ಇಂಡಸ್ಟ್ರಿಯಲ್ ಪಾಲಿಸಿ ತಕ್ಕ ಮಟ್ಟಿಗೆ ಉತ್ತಮವಾಗಿದೆ. ಆದರೆ ಚೀನಾಕ್ಕೆ ಹೋಲಿಸಿದರೆ ನಮಗೆ ಯಾವ ಸೌಲಭ್ಯವೂ ಇಲ್ಲ. ಚೀನಾದಲ್ಲಿ 15 ದಿನಗಳಲ್ಲಿ ಎಲ್ಲವೂ ಸಿಗುತ್ತದೆ. ನಮ್ಮಲ್ಲಿ ಒಂದು ಅನುಮತಿ ಪಡೆಯಲು 2-3 ವರ್ಷ ಬೇಕಾಗುತ್ತಿದೆ. ಇಂತಹ ಅಸಹಕಾರ ಪರಿಸ್ಥಿತಿಯಲ್ಲಿ ನಾವು ಉದ್ಯಮ ಬೆಳೆಸುತ್ತಿದ್ದೇವೆ. ನಮ್ಮಲ್ಲಿ ಪ್ರತಿಭಾವಂತರಿದ್ದಾರೆ, ಅವಕಾಶಗಳಿವೆ. ಆದರೆ ಸರಕಾರಗಳ ಸ ಕಾರಾತ್ಮಕ ಸ್ಪಂದನೆ ಇಲ್ಲ ಎಂದು ಅವರು ಹೇಳಿದರು.
ಗೋವಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷೆ ಪ್ರತಿಮಾ ದೋಂಡ್, ಇದು ಕೇವಲ ಪ್ರದರ್ಶನವಲ್ಲ, ಬದಲಾಗಿ ಉದ್ಯಮಗಳ ಬೆಳವಣಿಗೆಗೆ ಶಕ್ತಿಯುತ ವೇದಿಕೆಯಾಗಿದೆ. ಇಂತಹ ಪ್ರದರ್ಶನದ ಮೂಲಕ ಉದ್ಯಮಗಳನ್ನು ಬಲಪಡಿಸಬೇಕು ಎಂದರು.
ಕಾರ್ಯಕ್ರಮದ ಪ್ರಾಯೋಜಕರಾದ ಅಶೋಕ್ ಐರನ್ ಗ್ರೂಪ್, ದತ್ತಾ -ಅನಿತಾ ಫೈನಾನ್ಶಿಯಲ್ ಸರ್ವೀಸಸ್, ಕ್ವಾಲಿಟಿ ಅನಿಮಲ್ ಫೀಡ್ಸ್ ನ ಸಂಜೀವ್ ದೇಶಪಾಂಡೆ, ಹೈಡ್ರೋಪ್ಯಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸ್ನೇಹಂ ಟೇಪಿಂಗ್ ಸೊಲ್ಯೂಷನ್, ಪೋಸಿಟ್ರಾನ್ ಎಂಜಿನಿಯರಿಂಗ್ ಕಾರ್ಪೊರೇಷನ್, ಶ್ರೀನಿವಾಸ್ ಇಂಡಕ್ಷನ್ ಸನ್ಮಾನಿಸಲಾಯಿತು.
ಸಂಜೀವಿನಿ ಕೊಟಬಾಗಿ ಪ್ರಾರ್ಥನೆ ಹಾಡಿದರು. ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸ್ವಾಗತಿಸಿದರು. ಇವೆಂಟ್ ಚೇರಮನ್ ಉದಯ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಇವೆಂಟ್ ಕೋ ಚೇರಮನ್ ವಿಕ್ರಮ ಜೈನ್, ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಾದ ರೋಹಿತ್ ಕಪಾಡಿಯಾ, ಸಂದೀಪ ಬಾಗೇವಾಡಿ, ಅನಿತಾ ಕಣಬರ್ಗಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸತೀಶ ಕುಲಕರ್ಣಿ ವಂದಿಸಿದರು.
Laxmi News 24×7