ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಭಕ್ತಿ ಮತ್ತು ವಿಸ್ಮಯದ ಅಪರೂಪದ ಸಂಗಮವೊಂದು ಜರುಗುತ್ತಿದೆ. ವರ್ಷವಿಡೀ ಹನಿ ನೀರಿಲ್ಲದೆ ಬತ್ತಿ ಹೋಗುವ ಬೋರ್ವೆಲ್, ಜಾತ್ರೆಯ ಆ ದಿನಗಳಲ್ಲಿ ಮಾತ್ರ ಲಕ್ಷಾಂತರ ಜನರ ದಾಹ ತಣಿಸುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಏನಿದು ಪವಾಡ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಶಿವಯೋಗಿಗಳ ನಾಡು ಎಂದೇ ಪ್ರಸಿದ್ಧಿಯಾದ ಅಥಣಿಯಲ್ಲಿ ಈಗ ಮುರುಘೇಂದ್ರ ಶಿವಯೋಗಿಗಳ ಪವಾಡವೊಂದು ಭಕ್ತರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇಲ್ಲಿನ ದೇವಸ್ಥಾನದ ಆವರಣದಲ್ಲಿರುವ ಹಳೆಯ ಕೊಳವೆ ಬಾವಿಯೊಂದು ವರ್ಷದ ಮುನ್ನೂರ ಅರವತ್ತು ದಿನಗಳ ಕಾಲ ಸಂಪೂರ್ಣವಾಗಿ ಒಣಗಿರುತ್ತದೆ. ಸ್ಥಳೀಯರು ಎಷ್ಟೇ ಬಾರಿ ಪಂಪ್ ಹಾಕಿದರೂ, ಮೋಟಾರ್ ಆನ್ ಮಾಡಿದರೂ ಒಂದು ಹನಿ ನೀರು ಬರುವುದಿಲ್ಲ. ಆದರೆ, ಬಿರು ಬೇಸಿಗೆಯ ಸುಡುವ ಬಿಸಿಲಿನಲ್ಲಿ ಅಥಣಿ ಜಾತ್ರೆ ಆರಂಭವಾಗುತ್ತಿದ್ದಂತೆಯೇ, ಇದೇ ಬೋರ್ವೆಲ್ನಿಂದ ಗಂಗೆಯ ಹರಿವು ಆರಂಭವಾಗುತ್ತದೆ. ಈ ಅಚ್ಚರಿಯ ವಿದ್ಯಮಾನವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ ಅಥಣಿಗೆ ಲಕ್ಷಾಂತರ ಭಕ್ತರು ಮತ್ತು ಸಾವಿರಾರು ಜಾನುವಾರುಗಳು ಆಗಮಿಸುತ್ತವೆ. ಈ ವೇಳೆ ಕುಡಿಯುವ ನೀರಿಗೆ ತತ್ವಾರ ಉಂಟಾಗಬಾರದು ಎಂಬ ದೃಷ್ಟಿಯಿಂದ ಪ್ರಕೃತಿಯೇ ಇಲ್ಲಿ ಮಣಿದಂತಿದೆ. ಜಾತ್ರೆಯ ಸಂಭ್ರಮ ಇರುವವರೆಗೂ ಈ ಬೋರ್ವೆಲ್ನಲ್ಲಿ ನೀರಿನ ಸೆಲೆ ಎದೆಯ ಮಟ್ಟಕ್ಕೆ ಇರುತ್ತದೆ. ವಿಶೇಷವೆಂದರೆ, ಜಾತ್ರೆ ಮುಗಿದ ಮರುದಿನವೇ ಈ ನೀರಿನ ಹರಿವು ನಿಂತುಹೋಗುತ್ತದೆ. ಗ್ರಾಮಸ್ಥರು ಜಾತ್ರೆಯ ನಂತರ ಮರುದಿನವೇ ನೀರು ತೆಗೆಯಲು ಪ್ರಯತ್ನಿಸಿದರೂ ಬೋರ್ವೆಲ್ ಮತ್ತೆ ಮೊದಲಿನಂತೆ ಬತ್ತಿಹೋಗಿರುತ್ತದೆ. ಇದು ಕೇವಲ ಕಾಕತಾಳೀಯವೋ ಅಥವಾ ದೈವೀ ಶಕ್ತಿಯೋ ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.
ಸ್ಥಳೀಯ ಹಿರಿಯರು ಹೇಳುವಂತೆ, ಇದು ಶ್ರೀ ಮುರುಘೇಂದ್ರ ಶಿವಯೋಗಿಗಳ ಅಶೀರ್ವಾದದ ಫಲ. “ಭಕ್ತರ ಸೇವೆಗಾಗಿ ಸಿದ್ದಪುರುಷರು ಮಾಡಿರುವ ಮಹಿಮೆ ಇದು” ಎಂಬುದು ಜನರ ಅಚಲ ನಂಬಿಕೆ. ವಿಜ್ಞಾನಿಗಳು ಭೂಗರ್ಭದ ನೀರಿನ ಮಟ್ಟದ ಏರುಪೇರಿನ ಬಗ್ಗೆ ತರ್ಕಗಳನ್ನು ನೀಡಬಹುದಾದರೂ, ಕೇವಲ ಉತ್ಸವದ ದಿನಗಳಲ್ಲಿ ಮಾತ್ರ ನೀರು ಬಂದು, ನಂತರ ಮಾಯವಾಗುವ ಈ ಪ್ರಕ್ರಿಯೆಗೆ ಯಾರ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಒಟ್ಟಿನಲ್ಲಿ, ಬರಗಾಲದ ನಡುವೆಯೂ ಜಾತ್ರೆಯಲ್ಲಿ ಭಕ್ತರ ದಾಹ ತಣಿಸುತ್ತಿರುವ ಈ ಬೋರ್ವೆಲ್, ಅಥಣಿಯ ಧಾರ್ಮಿಕ ಇತಿಹಾಸದಲ್ಲಿ ಒಂದು ಜೀವಂತ ಪವಾಡವಾಗಿ ಉಳಿದುಕೊಂಡಿದೆ.
Laxmi News 24×7