ದೇವನಹಳ್ಳಿ: ಪ್ರೀತಿ ಮಧುರ, ತ್ಯಾಗ ಅಮರ ಅನ್ನೋ ಮಾತಿದೆ. ಆದರೆ ಇತ್ತೀಚಿನ ಯುವಕರು ಪ್ರೀತಿಗಾಗಿ ಪ್ರಾಣ ತೆಗೆಯಲೂ ಸಹ ಹಿಂದೆ ಮುಂದೆ ನೋಡಲ್ಲ. ತಮ್ಮ ಪ್ರೀತಿ ಸಿಗದಿದ್ದರೇ ಸಾಯಿಸಲೂ ಸಿದ್ದ, ಸಾಯಲೂ ಸಿದ್ದ ಅನ್ನುವಂತಿದ್ದಾರೆ. ನಿನ್ನೆ ಹೈದರಾಬಾದ್ನಲ್ಲೂ ಪಾಗಲ್ ಪ್ರೇಮಿಯೊಬ್ಬ ಯುವತಿ ಪ್ರೀತಿ ನಿರಾಕರಿಸಿದಕ್ಕೆ ಆಕೆಯನ್ನು ಸುಟ್ಟು ಚಿಕಿತ್ಸೆ ಫಲಿಸದೇ ಆತನೂ ಸತ್ತ ಘಟನೆ ನಡೆದಿತ್ತು.
ಅದೇ ಮಾದರಿಯಲ್ಲಿ ಇಲ್ಲೊಬ್ಬ ಪ್ರೇಮಿ ತಾನು ಪ್ರೀತಿಸಿದ ನವವಿವಾಹಿತೆಯನ್ನು ಪಾಳು ಬಿದ್ದ ಬಾವಿಗೆ ಬೀಳಿಸಿ ಕೊಲ್ಲಲು ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಸಮೀಪದ ಎ.ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
ಸದ್ಯ ನಾಲ್ಕು ದಿನಗಳಿಂದ ಊಟ, ನೀರು ಇಲ್ಲದೆ ಬಾವಿಯಲ್ಲೇ ಇದ್ದ ಮಹಿಳೆಯನ್ನು ರಕ್ಷಿಸಲಾಗಿದೆ.
ಮಾತನಾಡಲು ಬಂದವಳನ್ನೇ ಕೊಲ್ಲಲು ಯತ್ನ:
ಎ.ರಂಗನಾಥಪುರದ ನಿವಾಸಿ ಆದರ್ಶ ಎಂಬಾತ ಮಾಲೂರು ಮೂಲದ ಅಮೃತಾಳನ್ನು (23) ಬಾವಿಗೆ ಬೀಳಿಸಿದ್ದಾನೆ. ಕಳೆದ ಶನಿವಾರದೊಂದು ಮಾಲೂರಿನ ಸೊಣ್ಣಪ್ಪನಳ್ಳಿಯಿಂದ ಅಮೃತಾ ನಾಪತ್ತೆಯಾಗಿದ್ದಳು. ಅಲ್ಲಿಂದ ಆಕೆ ಪ್ರಿಯಕರ ಆದರ್ಶನನ್ನ ಭೇಟಿ ಮಾಡಿದ್ದಳು. ಈ ವೇಳೆ ಇವರಿಬ್ಬರ ಜೊತೆ ಅದೇನು ಮಾತುಕಥೆ ನಡಿತೋ ಗೊತ್ತಿಲ್ಲ. ಪ್ರಿಯಕರ ಆದರ್ಶ್ ಅಮೃತಾಳನ್ನ ಪಾಳು ಬಾವಿಗೆ ಬೀಳಿಸಿ ಎಸ್ಕೇಪ್ ಆಗಿದ್ದ. ಬಾವಿಗೆ ಬಿದ್ದಿದ್ದ ಅಮೃತಾ ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ.
ಪ್ರಿಯಕರ ಪೊಲೀಸ್ ವಶ:
ಊಟ ನೀರು ಇಲ್ಲದೆ ನಾಲ್ಕು ದಿನ ಸಾವು ಬದುಕಿನ ನಡುವೆ ಹೋರಾಡಿದ್ದಾಳೆ. ಕೊನೆಗೆ ನಿರಂತರ ಶಬ್ದಕೇಳಿದ ಹಿನ್ನೆಲೆ ಬಾವಿಯ ಪಕ್ಕದ ತೋಟದವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಜೆಸಿಬಿ ಬಳಸಿ ಇಬ್ಬರು ಸಿಬ್ಬಂದಿಯನ್ನು ಬಾವಿಯೊಳಕ್ಕೆ ಇಳಿಸಿ ನವವಿವಾಹಿತೆಯ ರಕ್ಷಣೆ ಮಾಡಿ ಅಸ್ವಸ್ಥ ಅಮೃತಳನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ಕೊಡಿಸುತ್ತಿದ್ದಾರೆ. ನವವಿವಾಹಿತೆ ಪ್ರಿಯಕರನೇ ಬಾವಿಗೆ ತಳ್ಳಿರೋದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸದ್ಯ ಪ್ರಿಯಕರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Laxmi News 24×7