ನವದೆಹಲಿ: ರಾತ್ರಿ ತನಗೆ ಊಟ ಬಡಿಸಲು ತಡಮಾಡಿದಳು ಎಂದು ಪುತ್ರನೊಬ್ಬ ಗುಂಡಿಟ್ಟು ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ.
ಬಾವಾನಾ ಕೈಗಾರಿಕಾ ಪ್ರದೇಶದ ನಿವಾಸಿ ಬಾಲಾ ದೇವಿ (60) ಹತಳಾದ ತಾಯಿ. ಸೂರಜ್ (26) ಹತ್ಯೆ ಮಾಡಿದವನು. ಆತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಅಕ್ರಮ ಪಿಸ್ತೂಲ್ ಅನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂರಜ್ ಶುಕ್ರವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದ. ಬಾಲಾದೇವಿ ಇನ್ನೂ ಅಡುಗೆ ಮಾಡುತ್ತಿದ್ದಳು. ಮನೆಗೆ ಬರುತ್ತಲೇ ಊಟಕ್ಕೆ ಕೊಡುವಂತೆ ಸೂರಜ್ ಒತ್ತಾಯಿಸಿದ್ದ. ಕಂಠಮಟ್ಟ ಕುಡಿದು ಬಂದಿದ್ದೀಯಾ. ಸ್ವಲ್ಪವಾದರೂ ನಶೆ ಇಳಿಯಲಿ. ಅಲ್ಲದೆ, ಇನ್ನೂ ಅಡುಗೆ ಆಗಬೇಕಿದೆ ಎಂದು ಬಾಲಾ ದೇವಿ ಹೇಳಿದ್ದಳು.
ಇದರಿಂದ ಕೆರಳಿದ ಸೂರಜ್ ತನ್ನ ಬಳಿ ಇದ್ದ ಅಕ್ರಮ ಪಿಸ್ತೂಲು ಬಳಸಿ ತಾಯಿಯ ಮೇಲೆ ಗುಂಡು ಸಿಡಿಸಿದ. ಗುಂಡಿನ ಮೊರೆತ ಕೇಳಿದ ನೆರೆಹೊರೆಯವರು ತಕ್ಷಣವೇ ಬಾಲಾ ದೇವಿ ಅವರ ಮನೆಗೆ ಬಂದಿದ್ದರು. ಗುಂಡು ಹಾರಿಸಿದ್ದು ಸೂರಜ್ ಎಂದು ಗೊತ್ತಾಗುತ್ತಲೇ ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದರು ಎನ್ನಲಾಗಿದೆ.
ಬಾವಾನಾ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಸೂರಜ್ ಕೆಲಸ ಮಾಡುತ್ತಿದ್ದ. ತನ್ನ ಪರಿಚಿತರೊಬ್ಬರಿಂದ ಅಕ್ರಮವಾಗಿ ಪಿಸ್ತೂಲ್ ಖರೀದಿಸಿ ತನ್ನ ಬಳಿ ಇಟ್ಟುಕೊಂಡಿದ್ದ. ಕೋಪದ ಕೈಗೆ ಬುದ್ಧಿಯನ್ನು ಕೊಟ್ಟ ಆತ ಇದೀಗ ಅದನ್ನು ಬಳಸಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7