ಬೆಳಗಾವಿಯ ಉಪವಿಭಾಗಾಧಿಕಾರಿಯೊಬ್ಬರು ಬಡ ದೀನ- ದಲಿತ- ನಿರ್ಗತಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಜಾಗ್ರತ ಪ್ರಜ್ಞೆ ಮೂಡಿಸುವ ಕಾರ್ಯಕ್ಕೆ ಇಳಿದಿದ್ದಾರೆ. ಇಂತಹ ಕಾರ್ಯ ಖಾನಾಪೂರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಂಡು ಬಂದಿದೆ. ಇದು ಗ್ರಾಮಸ್ಥರ ಹಾಗೂ ಬಡ ಪಾಲಕ-ಪೋಷಕರ ಮೆಚ್ಚುಗೆಗೆ ಕಾರಣವಾಗಿದೆ.
ನಿಜ, ಎಸಿ ಅಶೋಕ ತೇಲಿ ಕಳೆದೆರಡು ದಿನಗಳ ಹಿಂದೆ ಖಾನಾಪೂರದ ಸಮೀಪದ ಗ್ರಾಮಗಳ ಇಟ್ಟಂಗಿ ಭಟ್ಟಿಯಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕಂಡೊಡನೆ ದಿಢೀರ್ ಸ್ಥಳಕ್ಕೆ ಭೇಟಿ ಕೊಟ್ಟು ಪಾಲಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ತಿಳಿಹೇಳಿದ್ದಾರೆ. ಮಕ್ಕಳನ್ನು ಇಟ್ಟಂಗಿ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದ ಭಟ್ಟಿ ಒಡೆಯ ಹಾಗೂ ಕಾರ್ಮಿಕ ಗುತ್ತಿಗೆದಾರರ ವಿರುದ್ಧ ಕಿಡಿಕಾರಿ ಕೇಸ್ ಜಡಿದಿದ್ದಾರೆ.
ಇಟ್ಟಂಗಿ ಭಟ್ಟಿ ಮಕ್ಕಳ ಕೈಗೆ ಬುಕ್ ಕೊಟ್ಟು, ಕನಸು ನಿಮ್ಮದು ಕೆಲಸ ನಮ್ಮದು ಎಂಬ ಆಶಾಭಾವದ ಮಾತುಗಳನ್ನಾಡಿದ್ದಾರೆ. ಅವಶ್ಯಕತೆ ಇದ್ದರೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಇದರಿಂದ ಖುಷಿಯಾಗಿರುವ ಸ್ಥಳೀಯರು ಮತ್ತು ಪಾಲಕರು ಈ ಅಧಿಕಾರಿಯ ಜಾಗೃತಿ, ಕಳಕಳಿಯನ್ನು ಕೊಂಡಾಡಿದ್ದಾರೆ.
ಅಲ್ಲದೇ ಗುಂಜಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಳಲನ್ನು ಆಲಿಸಿ ಫಲಾನುಭವಿಗಳಿಗೆ ಸಿಗಬೇಕಾದ ಬಿಪಿಎಲ್ ಕಾರ್ಡ, ಪಿಂಚಣಿಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಅಧಿಕಾರಿಗೆ ಊರವರು ಭೇಷ್ ಎಂದು ಬೆನ್ನು ತಟ್ಟಿದ್ದಾರೆ.
Laxmi News 24×7