Breaking News

ಇಷ್ಟೊತ್ತಿಗೆ ಗುಡ್‍ನ್ಯೂಸ್ ಕೊಡ್ಬೇಕಿತ್ತು ಅಂತ ಪರಿಮಳ ನಾನು ಮಾತಾಡಿಕೊಂಡ್ವಿ: ಜಗ್ಗೇಶ್

Spread the love

ಬೆಂಗಳೂರು: ಚಿರು ಮೇಘನಾಳನ್ನು ತುಂಬಾ ಇಷ್ಟ ಪಡುತ್ತಿದ್ದ. ಅವರ ಮದುವೆಗೆ ಪೋಷಕರನ್ನು ಒಪ್ಪಿಸಿ ನಾನೇ ಮದುವೆ ಮಾಡಿಸಿದ್ದೆ ಎಂದು ಜಗ್ಗೇಶ್, ಚಿರಂಜೀವಿ ಮದುವೆ ಮಾಡಿಸಿದ ಘಟನೆ ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

ನಟ ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಚಿರಂಜೀವಿ ಮತ್ತು ಮೇಘನಾ ಮದುವೆಯ ಸಂದರ್ಭದಲ್ಲಿ ನಡೆದುದ್ದನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆಬಂತು. ನಾನು ಸಿಟ್ಟಿನಿಂದ ಯಾರು ಅಂದೆ?, ಆಗ ನಾನು ಮಾಮ ಚಿರು ಅಂದ. ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ. ನಕ್ಕು ದಯವಿಟ್ಟು ಮಾಮ ಅದು ಬಿಡಿ ಅಂದ. ವಿಷಯ ನಾನು ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಎಂದನು.

ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅವರು “ಜಗ್ಗೇಶ್, ಅಷ್ಟಮಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ. ಅದಮಾಡಿ ಮುಂದುವರೆಯಿರಿ” ಎಂದರು. ನಂತರ ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮದುವೆ ನಿಶ್ಚಯ ಆಯಿತು. ಗಣೇಶನ ಜೊತೆ ಒಂದು ಅತಿಥಿ ಪಾತ್ರ ಮಾಡುತ್ತಿದೆ. ಆ ಚಿತ್ರಿಕರಣ ಮೇಘನಾ ಮನೆ ಮುಂದೆಯೇ ಇತ್ತು. ಚಿತ್ರಿಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು ಅವರ ಮದುವೆಯ ವಿಷಯ ಮಾತಾಡಿದೆ. ನಂತರ ಮದುವೆ ಫಿಕ್ಸ್ ಆಗಿ ಮೇಘನಾ ಹಾಗೂ ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು.

ದೇವರ ದಯೆಯಿಂದ ಮದುವೆಯು ಮುಗಿಯಿತು. ನಂತರ ಚಿರು ಅನೇಕ ಬಾರಿ ಕರೆಮಾಡಿ “ಮಾಮ ದಯವಿಟ್ಟು ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ” ಎಂದು ಕರೆಯುತ್ತಿದ್ದ. ನನ್ನದು ವಿಚಿತ್ರ ಜನ್ಮ, ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ. ಯಾಕೋ ಇಂದು ನಾನು ಪರಿಮಳ ಚಿರು ಬಗ್ಗೆ ಮಾತಾಡುತ್ತಾ “ಏನ್ ಹುಡುಗರೋ, ಮದುವೆ ಆದ ಮೇಲೆ ಯಾಕೆ ಗ್ಯಾಪ್? ಇಷ್ಟೊತ್ತಿಗೆ ಗುಡ್‍ನ್ಯೂಸ್ ಬೇಕಿತ್ತು” ಎಂದು ಮಾತಾಡಿಕೊಂಡೆವು ಎಂದರು.

ಮಧ್ಯಾಹ್ನ ಊಟ ಮಾಡಿ ಮಲಗಿದೆ. ಚಾಲಕ ಪದ್ದು ಕರೆಮಾಡಿ, ಬಾಸ್  ಟಿವಿ ನೋಡಿದ್ರಾ? ಚಿರು ಹೋಗಿಬಿಟ್ಟಾ ಎಂದ. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ. ಇಷ್ಟೇನಾ ಬದುಕು? ಇದಕ್ಕಾ ನಮ್ಮ ಹೋರಾಟ? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ? ಎಂಥ ದೌರ್ಭಾಗ್ಯ. ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು. ಆ ಸಾಲಿಗೆ ಚಿರು ಸೇರಿಬಿಟ್ಟನೆ? ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

ಹುಟ್ಟಿಗೆ ಸಾವು ಖಚಿತ. ಆದರೆ ಇಷ್ಟು ಬೇಗವೇ? ಓ ದೇವರೆ ಈ ಸಾವು ನ್ಯಾಯವೆ ಎಂದು ದುಃಖದಿಂದ ಕಲಾಬಂಧುವಿಗೆ ವಿದಾಯ ಹೇಳಿದ್ದಾರೆ.

ಭಾನುವಾರ ಚಿರಂಜೀವಿ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ್ದ ಜಗ್ಗೇಶ್, ಕಳೆದ ಎರಡು ದಿನಗಳ ಹಿಂದೆ ಅರ್ಜುನ್ ಸರ್ಜಾ ಅವರು ನನಗೆ ಕರೆ ಮಾಡಿದ್ದರು. ಆಗ ನಾವು ಇವರ ಬಗ್ಗೆ ಮಾತನಾಡಿದ್ದೇವು. ಅರ್ಜುನ್ ನಾವು ದಡ ಸೇರಿದ್ದೇವೆ. ಈಗ ಧ್ರುವ ಮತ್ತು ಚಿರು ಕೂಡ ಚೆನ್ನಾಗಿದ್ದಾರೆ ಎಂದು ಹೇಳಿದ್ದರು. ನೋಡಿದರೆ ಈಗ ಈ ರೀತಿಯ ವಿಚಾರ ಕೇಳಿ ಬಹಳ ಬೇಸರವಾಯ್ತು. ಈಗ ನನಗೆ ಚಿರು ಆತ್ಮಕ್ಕೆ ಶಾಂತಿಕೋರುವುದಕ್ಕೂ ಹಿಂಜರಿಕೆ ಆಗುತ್ತಿದೆ ಎಂದು ಜಗ್ಗೇಶ್ ದು:ಖ ವ್ಯಕ್ತಪಡಿಸಿದ್ದರು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ