ಬೆಂಗಳೂರು, ಮೇ 27- ರಾಜ್ಯದಲ್ಲಿ ಪ್ರತಿ ಮನೆಗೂ ತೆರಳಿ ಆರೋಗ್ಯ ಸ್ಥಿತಿಗತಿಯನ್ನು ಸಮೀಕ್ಷೆ ನಡೆಸುವ ಮೂಲಕ ಹೆಲ್ತ್ ರಿಜಿಸ್ಟರ್ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಹೆಲ್ತ್ ರಿಜಿಸ್ಟರ್ ಬಗ್ಗೆ ಹದಿನೆಂಟು ವಿಭಾಗದಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ ತಜ್ಞರ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ಈ ಸಮೀಕ್ಷೆಯಿಂದ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಾಕಷ್ಟು ಅನುಕೂಲಗಳಾಗಲಿವೆ ಎಂದರು
ಈ ರೀತಿ ಯ ಸಮೀಕ್ಷೆ ವಿಶ್ವದ ಕೆಲವು ದೇಶಗಳಲ್ಲಿದೆ. ಭಾರತದಲ್ಲಿ ಯಾವ ರಾಜ್ಯದಲ್ಲೂ ಸಮೀಕ್ಷೆ ನಡೆದಿಲ್ಲ ಎಂದರು.ಎಲ್ಲರ ಆರೋಗ್ಯದ ಮಾಹಿತಿಯನ್ನು ಪಡೆದು ರಿಜಿಸ್ಟರ್ ಮಾಡಲು ಚರ್ಚೆ ನಡೆಸಲಾಗಿದೆ. ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುವುದು.
ರಾಜ್ಯದ ಆರುವರೆ ಕೋಟಿ ಜನರ ಆರೋಗ್ಯ ರಿಜಿಸ್ಟರ್ ನಿರ್ವಹಣೆ ಮಾಡಲಾಗುವುದು. ಇದರಿಂದ ಆರೋಗ್ಯ ಸೇವೆಯಲ್ಲಿ ಸುಧಾರಣೆ ಸಾಧ್ಯ ಮತ್ತು ಬಜೆಟ್ ನಲ್ಲಿ ಅನುದಾನ ನಿಗದಿಗೂ ಅನುಕೂಲವಾಗಲಿದೆ.
ಸಮೀಕ್ಷೆಗೆ ದೀರ್ಘ ಕಾಲಬೇಕಿದೆ, ಆದರೂ ಸುರು ಮಾಡುತ್ತೇವೆ. ಆಶಾ ಕಾರ್ಯಕರ್ತರು, ಖಾಸಗಿ ಆಸ್ಪತ್ರೆಗಳ ಸಹಕಾರದಲ್ಲಿ ಮಾಹಿತಿ ಸಂಗ್ರಹಿಸಲಾಗುವುದು ಎಂದರು.ಸಮೀಕ್ಷೆಗೆ ಪ್ರಶ್ನಾವಳಿಗಳನ್ನು ಎರಡು ಮೂರು ದಿನಗಳಲ್ಲಿ ಸಿದ್ದ ಪಡಿಸಲಾಗುವುದು
ಮುಂದಿನ ದಿನಗಳಲ್ಲಿ ಆಹಾರ, ನೀರು ಯಾವ ರೀತಿ ಇರಬೇಕು ಎಂಬ ಮಾಹಿತಿಯೂ ಸಮೀಕ್ಷೆ ಒಳಗೊಂಡಿರುತ್ತದೆ. ಜನ ಸಮೀಕ್ಷೆಯ ವೇಳೆ ಸಮಗ್ರ ಮಾಹಿತಿ ಹಂಚಿಕೊಳ್ಳಬೇಕು ಎಂದು ಹೇಳಿದರು.
ಸಮೀಕ್ಷೆಗೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಚರ್ಚೆ ನಡೆದಿದೆ. ಸಂಪನ್ಮೂಲ ಕ್ರೋಢಿಕರಣ ಬಗ್ಗೆ ಎಲ್ಲಾ ಆಯಾಮಗಳಿಂದ ಚರ್ಚೆ ನಡೆಸಲಾಗುವುದು. ಇದಲ್ಲದೆ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಏಕರೂಪ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಇದೆ ಎಂದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಾವದ್ ಅಕ್ತರ್, ಡಾ ಜವಳಿ, ಡಾ.ಪ್ರಭುದೇವ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.