ಅಥಣಿ ಗ್ರಾಮೀಣ: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಾರ್ ಲೈಸನ್ಸ್ ಹಂಚಿಕೆ ಹಗರಣ ವಿಚಾರದಲ್ಲಿ ವಿನಾಕಾರಣ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೆಸರು ಉಲ್ಲೇಖಿಸಿ ಬಿಜೆಪಿಯವರು ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದಾರೆ ಎಂದು ಅಥಣಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಆರೋಪಿಸಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನಿರೀಕ್ಷಣಾಮಂದಿರದಲ್ಲಿ ಅಥಣಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಅಬಕಾರಿ ಸಚಿವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈಗಾಗಲೇ ಸುಳ್ಳು ಆರೋಪಗಳ ಮೂಲಕ ಬಿ.ನಾಗೇಂದ್ರ ಹಾಗೂ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈಗ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಸಚಿವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆದಿದೆ ಎಂದರು.
ಎಂಆರ್ಎಚ್ಎಸ್ ತಾಲೂಕು ಅಧ್ಯಕ್ಷ ಹನುಮಂತ ಅರ್ದಾವೂರ ಮಾತನಾಡಿ, ೭ ದಲಿತ ಸಚಿವರ ಪೈಕಿ ಇಬ್ಬರು ಸಚಿವರ ರಾಜೀನಾಮೆ ಪಡೆದಿರುವ ಬಿಜೆಪಿ ಮತ್ತೆ ದಲಿತ ವಿರೋಧಿ ಎಂದು ಸಾಬೀತಾಗಿದ್ದು, ಅಬಕಾರಿ ಸಚಿವರ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಇದೇ ಚಾಳಿ ಮುಂದುವರಿಸಿದಲ್ಲಿ ರಾಜ್ಯಾದ್ಯಂತ ದಲಿತರು ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ರಾವಸಾಹೇಬ ಐಹೊಳೆ, ಕುಮಾರ ಗಸ್ತಿ, ಸದಾಶಿವ ದೊಡಮನಿ, ಸುನೀತಾ ಐಹೊಳೆ, ಸಂಜೀವ ಕಾಂಬಳೆ, ಕುಮಾರ ಐದನ್ನವರ, ವಿಜಯಕುಮಾರ ಬಡಚಿ, ಶಿವಾನಂದ ಸೌದಾಗರ, ಸುದೀಪ ಐಹೊಳೆ, ಪ್ರಕಾಶ ಕಾಂಬಳೆ, ರಾಜು ರಾಜಂಗಳೆ ಇತರರಿದ್ದರು.
Laxmi News 24×7