ಹೂಲಿ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದ ಹೊಲದಲ್ಲಿ ಭಾನುವಾರ, ಹೊಯ್ಸಳರ ಕಾಲದ ತಾಮ್ರದ ಲಾಂಛನ ಪತ್ತೆಯಾಗಿದೆ.
ಹೂಲಿಯ ರೈತ ರಂಗಪ್ಪ ಹೊಳಗ್ಯಾರ ಉಳುಮೆ ಮಾಡುವಾಗ, ನೆಲದಲ್ಲಿ ಹೂತಿದ್ದ ಈ ಲಾಂಛನ ತಾಗಿದೆ. ಮಣ್ಣು ಕೆದರಿ ನೋಡಿದಾಗ ಲಾಂಛನ ಸಿಕ್ಕಿತು.
ಉಗ್ರ ನೇತ್ರದ ಹುಲಿ, ಹುಲಿಯನ್ನು ಕೊಲ್ಲಲು ಸನ್ನದ್ಧನಾದ ಸಳನ ಮೂರ್ತಿ ಕೂಡ ಇದೆ. ಸಳನ ಎಡಗೈ ತುಂಡರಿಸಿದ್ದು ಬಿಟ್ಟರೆ ಲಾಂಛನ ನೋಡಲು ಸೊಗಸಾಗಿದೆ.
ಪುರಾತತ್ವ ಸರ್ವೇಕ್ಷಣಾ ಇಲಾಖೆ ಧಾರವಾಡ ವಲಯದ ಸಹಾಯಕ ಅಧೀಕ್ಷಕ ಎಚ್.ಆರ್.ದೇಸಾಯಿ, ಎಸ್.ಎಂ. ದೇವರಾಜ, ಬೆಳಗಾವಿ ಪ್ರಭಾರಿ ಅಜಯ ಜನಾರ್ದನ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಲಾಂಛನ 14ನೇ ಶತಮಾನಕ್ಕೆ ಸೇರಿರಬಹುದು ಎಂದು ಅಂದಾಜಿಸಿದ್ದಾರೆ.
101 ಪುರಾತನ ದೇವಸ್ಥಾನಗಳನ್ನು ಹೊಂದಿದ ಹೂಲಿ ಗ್ರಾಮ ‘ಮಿನಿ ಹಂಪಿ’ ಎಂದೇ ಪ್ರಸಿದ್ಧ. ಕಲ್ಯಾಣದ ಚಾಲುಕ್ಯರ ಶಿಲಾ ಶಾಸನಗಳು, ಲಾಂಛನಗಳು, ವಸ್ತುಶಿಲ್ಪದ ದೇವಸ್ಥಾನಗಳು ಇಲ್ಲಿ ಸಾಕಷ್ಟಿವೆ. ಆದರೆ, ಇದೇ ಮೊದಲ ಬಾರಿಗೆ ಹೊಯ್ಸಳರ ಲಾಂಛನ ಪತ್ತೆಯಾಗಿದ್ದು ಕುತೂಹಲ ಕೆರಳಿಸಿದೆ.
Laxmi News 24×7